ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ತೌಖ್ತೆ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಪ್ರದೇಶ ವಿಲವಿಲ ಎನ್ನುತ್ತಿದೆ. ಕಳೆದ 24 ಗಂಟೆಗಳಿಂದ ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಮಲೆನಾಡಿನ ಮೂರು ಜಿಲ್ಲೆಗಳಲ್ಲಿ ಮಳೆರಾಯನ ಅಟ್ಟಹಾಸ ಎಲ್ಲೆ ಮೀರುತ್ತಿದೆ.
ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಇಲ್ಲಿಯವರೆಗೆ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಈ ಚಂಡಮಾರುತ 73 ಗ್ರಾಮಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯು ತೌಖ್ತೆ ಚಂಡಮಾರುತ ಬೀಸುವ ಹಿನ್ನೆಲೆಯಲ್ಲಿ ಮಂಗಳೂರು, ಕಾರವಾರ, ಮಲ್ಪೆ, ಭಟ್ಕಳ, ಹೊನ್ನಾವರ ಹಾಗೂ ಕೇರಳದ ತಿರುವನಂತಪುರಗಳಿಗೆ ಮುನ್ನೆಚ್ಚರಿಕೆ ಘೋಷಿಸಿದೆ.
ಮಲ್ಪೆ ಬೀಚ್ ಬಳಿ ಚಂಡಮಾರುತದ ರಭಸಕ್ಕೆ ತೀರದಲ್ಲಿರುವ ಮೀನುಗಾರಿಕೆ ದೋಣಿಗಳು ಹಾನಿಯಾಗಿವೆ.
ಮಂಗಳೂರಿನ ಎಲ್ಲ ತಾಲೂಕುಗಳಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳು ಹಾನಿಯಾಗಿವೆ. ಅಲ್ಲದೇ, ತೆಂಗು ಸೇರಿದಂತೆ ತೋಟ – ಗದ್ದೆಗಳಲ್ಲಿ ನೀರು ನುಗ್ಗುತ್ತಿದೆ. ವಿದ್ಯುತ್ ಕಂಬಗಳು, ಮರಗಳು ಧರೆಗೆ ಉರುಳಿವೆ. ಜನರು ಕೈಯಲ್ಲಿ ಜೀವ ಹಿಡಿದು ಬುದುಕು ಸಾಗಿಸುತ್ತಿದ್ದಾರೆ. ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.