ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಬೆಳಗಾವಿಯಲ್ಲಿ ಕೂಡ ಕಳೆದ ಕೆಲವು ದಿನಗಳಿಂದ ಮಳೆ ಬೆಂಬಿಡದೆ ಸುರಿಯುತ್ತಿದೆ. ಈ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಜಿಲ್ಲೆಯ ಮಾರ್ಕಂಡೆಯ ನದಿಯ ಪ್ರವಾಹದಲ್ಲಿ ರೈತರೊಬ್ಬರು ಕೊಚ್ಚಿ ಹೋಗಿದ್ದಾರೆ. ಕಾಕತಿ ಗ್ರಾಮದ ಸಿದ್ರಾಯಿ ದೊಡ್ಡರಾಮಾ ಸುತಗಟ್ಟಿ (65) ಕೊಚ್ಚಿ ಹೋದ ರೈತ.
ಈ ರೈತ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಕೃಷಿ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನದಿಯ ಸೇತುವೆ ಬಳಿ ಕೈ ಕಾಲು ತೊಳೆದುಕೊಳ್ಳುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಪ್ರವಾಹದಲ್ಲಿ ರೈತ ಕೊಚ್ಚಿ ಹೋಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಳಗಾವಿ ಎಸಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರಾಕಾರ ಮಳೆ ಮತ್ತು ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ ಕಾರ್ಯಾಚರಣೆ ಅರ್ಧದಲ್ಲಿಯೇ ಅಧಿಕಾರಿಗಳು ಮೊಟಕುಗೊಳಿಸಿದ್ದಾರೆ. ಮತ್ತೆ ಇಂದು ಬೆಳಿಗ್ಗೆ ಶೋಧ ಕಾರ್ಯ ನಡೆಯಲಿದೆ.