ನಕಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮೂವರನ್ನು ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

0
Spread the love

ವಿಜಯಸಾಕ್ಷಿ ಸುದ್ದಿ, ರೋಣ

Advertisement

ಕಳೆದ ಹಲವು ದಿನಗಳಿಂದ ಡಿಎಪಿ ಮಂಗಲ ಹೆಸರಲ್ಲಿ ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜರುಗಿದೆ.

ತಾಲ್ಲೂಕಿನ ಸವಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇತ್ತೀಚೆಗೆ ನಕಲಿ ಗೊಬ್ಬರ ಮಾರಾಟ ಮಾಡುವವರ ಜಾಲವೇ ಹುಟ್ಟಿಕೊಂಡಿತ್ತು. ನೂರಾರು ರೈತರು ನಕಲಿ ಗೊಬ್ಬರವನ್ನು ಬಳಕೆ ಮಾಡುವ ಮೂಲಕ ಸಂಕಷ್ಟವನ್ನು ಸಹ ಅನುಭವಿಸಿದ್ದರು. ಕೃಷಿ ಇಲಾಖೆಯ ಅಧಿಕಾರಿಗಳು ನಕಲಿ ಗೊಬ್ಬರದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ಸಂದೇಶ ನೀಡಿದ್ದರು. ಇದನ್ನು ಗಮನಿಸಿದ್ದ ಸವಡಿ ಗ್ರಾಮದ ರೈತರು ಶನಿವಾರ ಲಾರಿ ಸಮೇತ ನಕಲಿ ಗೊಬ್ಬರ ಪೂರೈಕೆ ಮಾಡುತ್ತಿದ್ದವರನ್ನು ಕೂಡಿ ಹಾಕಿ ಚಳಿ‌ ಬಿಡಿಸಿದ್ದಾರೆ.

ಸುದ್ದಿ ತಿಳಿದು ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನಕಲಿ ಗೊಬ್ಬರ ಮಾರಾಟ ಮಾಡುತ್ತಿದ್ದ ಚಿತ್ರದುರ್ಗ ಜಿಲ್ಲೆಯ ತಿಪ್ಪೇಸ್ವಾಮಿ ಹಾಗೂ ಮಂಜುನಾಥ್ ತಂದೆ ಚಂದ್ರಪ್ಪ ಹಾಗೂ ಲಾರಿ ಚಾಲಕ ತಮಿಳುನಾಡಿನ ಬಾಲಮೃಗ ಎಂಬುವವರನ್ನು ವಶಕ್ಕೆ ಪಡೆದು 50 ಕೆ ಜಿಯ 475 ಬ್ಯಾಗ ವಶಪಡಿಸಿಕೊಂಡಿದ್ದಾರೆ.

ನಕಲಿ ರಸಗೊಬ್ಬರ ಮಾರಾಟ ಜಾಲದ ಕಿಂಗ್ ಫಿನ್ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ.

ನಕಲಿ ಗೊಬ್ಬರ ಮಾರಾಟ ಹೇಗೆ?

ಚೀಲದ ಮೇಲೆ ಡಿಎಪಿ ಮಂಗಲ ಎಂದು ಬರೆಯುವ ಮೂಲಕ ಚೀಲದೊಳಗೆ ನಕಲಿ ಗೊಬ್ಬರವನ್ನು ತುಂಬಿರಲಾಗಿರುತ್ತದೆ. ಮುಗ್ಧ ರೈತರು ಡಿಎಪಿ ಗೊಬ್ಬರ ಇರಬಹುದು ಎಂದು ನಂಬಿ ಖರೀದಿಸುತ್ತಾರೆ. ಆದರೆ ಚೀಲದ ಮೇಲೆ ಮಾತ್ರ ಡಿಎಪಿ ಎಂದು ಇದ್ದು ಚೀಲದೊಳಗೆ ಬೂದಿ ಮಾತ್ರ ಇರುತ್ತದೆ. ಇದನ್ನು ಪರೀಕ್ಷೆ ಮಾಡಿದರೆ ಸಾಕು ಬೂದಿ ಹಾಗೂ ಮಣ್ಣು ಹೊರ ಬರುತ್ತದೆ.


Spread the love

LEAVE A REPLY

Please enter your comment!
Please enter your name here