–ರಾಜಕೀಯದ ಬಗ್ಗೆ ಮಾತನಾಡಲ್ಲ
ವಿಜಯಸಾಕ್ಷಿ ಸುದ್ದಿ, ಗಂಗಾವತಿ
ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ ಹಾಗೂ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ನಟಿ ಶೃತಿ ತಾಲ್ಲೂಕಿನ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಹಂಪಿಯಿಂದ ರಸ್ತೆ ಮಾರ್ಗದ ಮೂಲಕ ಆಗಮಿಸಿದ ಉಭಯರು ಸುಮಾರು 572 ಮೆಟ್ಟಿಲುಗಳ ಎತ್ತರದಲ್ಲಿರುವ ಬೆಟ್ಟವನ್ನು ಹತ್ತಿದರು. ದೇವರ ದರ್ಶನದ ಬಳಿಕ ದೇಗಿಲದ ಆವರಣದಲ್ಲಿಯೇ ಉಪಹಾರ ಸೇವಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಯೋಗೇಶ್ವರ, ಪ್ರವಾಸೋದ್ಯಮ ಇಲಾಖೆಯಡಿ ಬರುವ ತಾಣಗಳ ಅಭಿವೃದ್ದಿ ವಿಚಾರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲು ಬಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಯಾವುದೇ ರಾಜಕೀಯ ಮಾತನಾಡಲು ಇಚ್ಚಿಸುವುದಿಲ್ಲ ಎಂದ ಸಚಿವರು, ಬಿಎಸ್ವೈ ತಮ್ಮ ನಾಯಕರು ಹಾಗೂ ಸರಕಾರದಲ್ಲಿ ಅವರು ಸಿಎಂ ಆಗಿಯೇ ಮುಂದುವರೆಯಲಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.
ಶಾಸಕ ಬಸನಗೌಡ ಯತ್ನಾಳ ಹಾಗೂ ಕೂಡಲಸಂಗಮ ಶ್ರೀಗಳ ಭೇಟಿ ಸೌಜನ್ಯದ ಭೇಟಿಯಷ್ಟೇ.. ಈ ಭಾಗಕ್ಕೆ ಬಂದಿದ್ದು, ಸೌಜನ್ಯಕ್ಕಾಗಿ ಅವರನ್ನು ಭೇಟಿ ಮಾಡಿದ್ದೇನೆ. ರಾಜಕೀಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಪರೀಕ್ಷೆ ಬರೆದಿದ್ದೇನೆ. ಶೀಘ್ರದಲ್ಲೇ ಫಲಿತಾಂಶ ಬರುತ್ತೆ ಎಂದು ಮಾರ್ಮಿಕವಾಗಿ ಹೇಳಿದರು.
ಈ ವೇಳೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ, ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಸ್ಥಳಿಯರಿಗೆ ಅನುಕೂಲಕ್ಕಿಂದ ಅನಾನುಕೂಲವೇ ಹೆಚ್ಚಾಗಿದೆ. ಈ ಹಿನ್ನೆಲೆ ಪ್ರಾಧಿಕಾರದ ವ್ಯಾಪ್ತಿಯನ್ನು ಬದಲಿಸಬೇಕು. ಇಲ್ಲ ಅಭಿವೃದ್ಧಿಗೆ ಪೂರಕವಾಗಿ ನಿರ್ಮಾಣವಾಗುವ ಕಾಮಗಾರಿಗಳಿಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಬಳಿಕ ಸಚಿವ ಯೋಗೇಶ್ವರ ಮತ್ತು ಶೃತಿ, ಆನೆಗೊಂದಿಯ ಪುರಾತನ ಶೈಲಿಯ ಅರಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ನಾರಾಯಣ ಕನಕ ರೆಡ್ಡಿ, ತಹಸೀಲ್ದಾರ್ ಯು.ನಾಗರಾಜ್ ಇತರರು ಇದ್ದರು.