ವಿಜಯಸಾಕ್ಷಿ ಸುದ್ದಿ, ರೋಣ
ಪಿಎಸ್ಐ ವಿನೋದ ಪೂಜಾರ್ ಅವರು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದು, ಅಂಥವರ ವಿರುದ್ಧ ಬಿಜೆಪಿ ಕಾರ್ಯಕರ್ತನೆಂದು ಆರೋಪ ಮಾಡಿದ್ದು ಸರಿಯಲ್ಲ ಎಂದು ಬಿಜೆಪಿ ಘಟಕದ ಎಸ್ಸಿ ಮೋರ್ಚಾ ಅಧ್ಯಕ್ಷ, ಜಿ.ಪಂ. ಸದಸ್ಯ ಪಡಿಯಪ್ಪ ಪೂಜಾರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪಿಎಸ್ಐ ವಿನೋದ ಪೂಜಾರ ಅವರ ದಕ್ಷತೆ ಪ್ರಶ್ನಾತೀತ. ಅವರು ಬಿಜೆಪಿ ಮುಖಂಡರ ಬೈಕ್ಗಳನ್ನು ಹಿಡಿದು ದಂಡ ಹಾಕಿದ ಉದಾಹರಣೆಗಳು ಸಾಕಷ್ಟಿವೆ. ಇದನ್ನು ಆರೋಪ ಮಾಡುವವರು ಅರ್ಥ ಮಾಡಿಕೊಳ್ಳಬೇಕು. ಹನುಮಂತ ಚಲವಾದಿ ಹಾಗೂ ಮುತ್ತು ನಂದಿ ಎಲ್ಲ ವಿಷಯಗಳಿಗೆ ಬಿಜೆಪಿಯನ್ನು ಎಳೆದು ತರುವುದನ್ನು ನಿಲ್ಲಿಸಬೇಕು. ಇದು ಅವರಿಗೆ ನೀಡುವ ಕೊನೆಯ ಎಚ್ಚರಿಕೆಯಾಗಿದೆ ಎಂದರು.
ಲಾಕ್ಡೌನ್ ಸಂದರ್ಭದಲ್ಲಿ ನಾಗರಿಕರ ಜೀವ ರಕ್ಷಿಸಲು ದಿನದ 24 ಘಂಟೆಗಳ ಕಾಲ ಸೇವೆಯನ್ನು ಸಲ್ಲಿಸಿರುವ ಪಿಎಸ್ಐ ವಿರುದ್ಧ ನಿರಾಧಾರ ಆರೋಪ ಮಾಡಿರುವುದು ಸಮಂಜಸವಲ್ಲ. ಓರ್ವ ಅಧಿಕಾರಿಯ ವಿರುದ್ಧ ಪಕ್ಷವನ್ನು ಎಳೆದು ತಂದಿರುವುದು ಉಚಿತವಲ್ಲ. ಪಿಎಸ್ಐ ವಿನೋದ ಪೂಜಾರ ಅವರು ಬಡವರಿಗೆ ಹಾಗೂ ನಿರ್ಗತಿಕರಿಗೆ ಸಹಾಯಹಸ್ತ ಚಾಚಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಮುಂದಾದರೂ ಹನುಮಂತ ಚಲವಾದಿ ಹಾಗೂ ಮುತ್ತು ನಂದಿ ಇಂತಹ ಹೇಳಿಕೆಯಿಂದ ದೂರ ಸರಿಯಬೇಕು. ಇಲ್ಲದಿದ್ದರೆ ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುವ ಪಿಎಸ್ಐ; ಬಡವರಿಂದ ಹಫ್ತಾ ವಸೂಲಿ ಆರೋಪ
ಮಲ್ಲು ಮಾದರ ಮಾತನಾಡಿ, ವಿನೋದ ಪೂಜಾರ ಅವರಂತಹ ನಿಷ್ಠಾವಂತ ಅಧಿಕಾರಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದು ಖಂಡನೀಯ. ಮುಖ್ಯವಾಗಿ ಪಿಎಸ್ಐ ಅವರು ತಮ್ಮ ಕರ್ತವ್ಯವನ್ನು ಯಾರ ಭಯವಿಲ್ಲದೆ ನಿಭಾಯಿಸುತ್ತಿದ್ದಾರೆ. ಯಾವತ್ತಿಗೂ ಅವರು ಯಾರನ್ನೂ ರಾಜಕೀಯ ಕ್ಷೇತ್ರದಿಂದ ಗುರುತು ಮಾಡಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ನಾಗರಿಕ ಸಮುದಾಯದ ಆರೋಗ್ಯದ ದೃಷ್ಟಿಯಿಂದ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ ಎಂದರು.
ಪರಸಪ್ಪ ಪೂಜಾರ, ಶರಣು ಚಲವಾದಿ, ಶೇಖಪ್ಪ ಮಾದರ, ಮುದಿಯಪ್ಪ ದಾನಿ, ಮುತ್ತಪ್ಪ ಪೂಜಾರ, ಮುತ್ತಪ್ಪ ಜೋಗಣ್ಣವರ, ನಿಂಗಪ್ಪ ಮಾದರ, ಮಂಜು ಚಲವಾದಿ, ಯಲ್ಲಪ್ಪ ಚಲವಾದಿ, ಮೈಲಾರಪ್ಪ ಮಾದರ ಉಪಸ್ಥಿತರಿದ್ದರು.