ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಶನಿವಾರ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಮಾಹಿತಿ, ಶಿಕ್ಷಣ, ಸಂವಹನ ಮತ್ತು ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ ಜರುಗಿತು.
ಬೆಂಗಳೂರಿನ ಬಿಬಿಎಂಪಿಯಿನ ಉತ್ತಮ ತರಬೇತುದಾರ ಪ್ರಶಸ್ತಿ ಪಡೆದ ಬಸವರಾಜ ಬಂಡಿವಾಡ ಮಾತನಾಡಿ, ಪಟ್ಟಣದ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದು. ಅವರು ಕೆಲಸ ಮಾಡದಿದ್ದರೆ ಇಡೀ ಊರು ಗಬ್ಬೆದ್ದು ನಾರುತ್ತದೆ. ಆದರೆ ಅವರು ಕೇವಲ ಸ್ವಚ್ಛತೆಗೆ ಆದ್ಯತೆ ನೀಡದೆ ತಮ್ಮ ಆರೋಗ್ಯದ ಬಗ್ಗೆ ಗಮನ ವಹಿಸಬೇಕು. ಪೌರ ಕಾರ್ಮಿಕರಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಕಾಲ ಕಾಲಕ್ಕೆ ಅವರಿಗೆ ತರಬೇತಿಯ ಅಗತ್ಯ ಇರುತ್ತದೆ. ಈ ನಿಟ್ಟಿನಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಇಡೀ ರಾಜ್ಯದ ಪೌರ ಕಾರ್ಮಿಕರಿಗೆ ಸಾಮರ್ಥ್ಯಾಭಿವೃದ್ಧಿ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಪೌರ ಕಾರ್ಮಿಕರು ಹೆಚ್ಚಿನ ಕಾಳಜಿಯಿಂದ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯವಿದೆ. ಬೆಳಗಿನ ಜಾವದಿಂದಲೇ ಕರ್ತವ್ಯಕ್ಕೆ ಹಾಜರಾಗುವ ಕಾರ್ಮಿಕರಿಗಾಗಿ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪಟ್ಟಣವು ಬೆಳೆಯುತ್ತಿರುವ ಹಿನ್ನೆಲೆನಲ್ಲಿ ನಿರ್ವಹಣೆಗಾಗಿ ಪೌರಕಾರ್ಮಿಕರ ಕೊರತೆ ಇದ್ದು, ಪೌರಕಾರ್ಮಿಕರ ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಮನವಿ ನೀಡಲಾಗಿದೆ ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ ಪೌರ ಕಾರ್ಮಿಕರಿಗಾಗಿ ಇರುವ ಸೌಲಭ್ಯಗಳ ಕುರಿತು ಮಾತನಾಡಿದರು. ಆರೋಗ್ಯ ಇಲಾಖೆಯ ಪ್ರಕಾಶ ಕರ್ಜಗಿ ಪೌರ ಕಾರ್ಮಿಕರಿಗೆ ಬರುವ ರೋಗಗಳು ಹಾಗೂ ಅವುಗಳ ನಿಯಂತ್ರಣದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ಹನಮಂತಪ್ಪ ನಂದೆಣ್ಣವರ, ಪೌರ ಕಾರ್ಮಿಕರು, ಲೋಡರ್ಗಳು, ವಾಹನ ಚಾಲಕರು ಇದ್ದರು.