ವಿಜಯಸಾಕ್ಷಿ ಸುದ್ದಿ, ಗದಗ:
ದೇಶದಲ್ಲಿ ಡಿಜಿಟಲ್ ಇಂಡಿಯಾ ಜಾರಿಗೆ ಬಂದ ಬಳಿಕ ಆನ್ಲೈನ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಹಣಕಾಸಿನ ವ್ಯವಹಾರ ಮಾಡಬೇಕಾದರೂ ಬ್ಯಾಂಕ್ಗೆ ಹೋಗದೆ ಬಹುತೇಕರು ಪೋನ್ ಪೇ, ಗೂಗಲ್ ಪೇನಂತಹ ಆಪ್ಗಳ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದಾರೆ.
ಆದರೆ, ಇಂತಹ ಆಪ್ಗಳನ್ನು ಬಳಸುವವರು, ಆನ್ಲೈನ್ ವ್ಯವಹಾರ ಮಾಡುವವರು ಮೋಸ ಹೋಗುತ್ತಿರುವುದು ಹೊಸತಲ್ಲ. ಇಂತಹದ್ದೇ ಒಂದು ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಖದೀಮರು ಪೋನ್ ಪೇ ಆಪ್ ಬಳಸುತ್ತಿದ್ದ ನರ್ಸ್ ವೊಬ್ಬರ ಅಕೌಂಟ್ ಹ್ಯಾಕ್ ಮಾಡಿ ವಂಚಿಸಿದ್ದಾರೆ.
ಅಪರಿಚಿತ ವ್ಯಕ್ತಿಯೋರ್ವ ಫೋನ್ ಪೇ ಅಕೌಂಟ್ ಹ್ಯಾಕ್ ಮಾಡಿ 4.98 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಗದಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಕ್ಷ್ಮೇಶ್ವರ ಪಟ್ಟಣದ ನಿವಾಸಿ ಜ್ಯೋತಿ ನಾಗರಾಜ ವಾಲಿ ಈ ಕುರಿತು ದೂರು ದಾಖಲಿಸಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿರುವ ಜ್ಯೋತಿ ಅವರ ಫೋನ್ ಪೇ ಹ್ಯಾಕ್ ಮಾಡಿರುವ ಖದೀಮರು, ಲಕ್ಷ್ಮೇಶ್ವರ ಎಸ್ಬಿಐ ಖಾತೆಯಿಂದ ಜೂ. 26ರಿಂದ ಅ. 10ರ ಅವಧಿಯಲ್ಲಿ ಹಂತ ಹಂತವಾಗಿ 4.98 ಲಕ್ಷ ರೂ. ಡ್ರಾ ಮಾಡಿಕೊಂಡು ವಂಚಿಸಿದ್ದಾರೆ. ಇದು ಇತರ ಪೋನ್ ಪೇ ಬಳಕೆದಾರರಿಗೆ ಆತಂಕ ಮೂಡಿಸಿದೆ.