ವಿಜಯಸಾಕ್ಷಿ ವಿಶೇಷ, ಕೊಪ್ಪಳ
ಎಸ್ಪಿ ಅಂದ್ರೆ ಪೊಲೀಸ್ ವಾಹನದಲ್ಲಿ ಓಡಾಡ್ತಾರೆ. ಆದರೆ ಕೊಪ್ಪಳ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಗುರುವಾರ ಬೈಕ್ನಲ್ಲೇ ಸಿಟಿ ರೌಂಡ್ ಹಾಕಿದ್ರು.
ವಿಷಯ ಏನಂದ್ರೆ ಜನವರಿ 15ರಿಂದ ಕೊಪ್ಪಳ ಜಿಲ್ಲೆಯಲ್ಲಿ ಬೈಕ್ ಸವಾರರಿಗೆ ಹೆಲ್ಮೇಟ್ ಹಾಗೂ ಕಾರು ಚಾಲಕರಿಗೆ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಬೈಕ್ ಜಾಥಾ ನಡೆಸಲಾಯಿತು. ಜಾಥಾದಲ್ಲಿ ಸ್ವತಃ ಎಸ್ಪಿಯವರೇ ಹೆಲ್ಮೇಟ್ ಧರಿಸಿ ಕೊಪ್ಪಳ ನಗರದಲ್ಲಿ ಜಾಥಾ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರು ಬೈಕ್ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು. ಈ ನಿಯಮ ಸಾರ್ವಜನಿಕರನ್ನು ಪೀಡಿಸುವುದಕ್ಕಾಗಿ ಅಲ್ಲ, ಬದಲಾಗಿ ನಿಮ್ಮ ಜೀವ ಉಳಿಸುವುದಕ್ಕಾಗಿ ಕಳೆದ ವರ್ಷ ಜಿಲ್ಲೆಯಲ್ಲಿ ನಡೆದ ಬೈಕ್ ಅಪಘಾತಗಳಲ್ಲಿ ಸಂಭವಿಸಿದ ಸಾವು-ನೋವುಗಳಲ್ಲಿ ಹೆಲ್ಮೇಟ್ ಧರಿಸದಿರುವುದೇ ಪ್ರಮುಖ ಕಾರಣ ಎಂಬುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಹಾಗಾಗಿ ಈ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು, ನಿಯಮಗಳನ್ನು ಪಾಲಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ವೆಂಕಟಪ್ಪ ನಾಯಕ್, ನಗರ ಠಾಣೆಯ ಪಿಐ ಮಾರುತಿ ಗುಳ್ಳಾರಿ, ಕೊಪ್ಪಳ ಗ್ರಾಮೀಣ ವೃತ್ತದ ಸಿಪಿಐ ವಿಶ್ವನಾಥ ಹಿರೇಗೌಡರ್ ಇತರರು ಇದ್ದರು.