ವಿಜಯಸಾಕ್ಷಿ ಸುದ್ದಿ, ರಾಯಚೂರು
ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಮಂತ್ರಾಲಯ ಗ್ರಾಮ ಜಲಾವೃತವಾಗಿದೆ.
ಇಲ್ಲಿನ ಕಲ್ಲುದೇವಕುಂಟ ಹಳ್ಳ ತುಂಬಿ ಮಂತ್ರಾಲಯಕ್ಕೆ ನೀರು ನುಗ್ಗಿದೆ. ಕರ್ನಾಟಕ ಭವನ, ಕಲ್ಯಾಣ ಮಂಟಪ, ಬಸ್ ನಿಲ್ದಾಣಕ್ಕೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಬೆಳಿಗ್ಗೆ ಮಳೆ ಸ್ವಲ್ಪ ತಗ್ಗಿರುವುದರಿಂದ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ.
ಎಮ್ಮಿಗನೂರು ರಸ್ತೆಯ ಹಳ್ಳ ಉಕ್ಕಿಹರಿದ ಪರಿಣಾಮ ಮಂತ್ರಾಲಯದಲ್ಲಿ ನೀರು ತುಂಬಿದೆ. ಮಂತ್ರಾಲಯ – ಬೆಂಗಳೂರು ರಸ್ತೆ ಮಾರ್ಗ ಬಂದ್ ಆಗಿದೆ. ಮಂತ್ರಾಲಯ ಗ್ರಾಮದ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರ ಸ್ಥಗಿತವಾಗಿವೆ.
ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಪರಿಣಾಮವಾಗಿ ಮನೆಯಲ್ಲಿಟ್ಟಿದ್ದ ದವಸ- ಧಾನ್ಯ ಸೇರಿದಂತೆ ಮನೆಯಲ್ಲಿ ವಸ್ತುಗಳೆಲ್ಲಾ ಹಾಳಾಗಿವೆ.
ಮಂತ್ರಾಲಯದಲ್ಲಿನ ಕರ್ನಾಟಕ ಭವನದಲ್ಲಿಯೂ ನೀರು ಹೊಕ್ಕಿದೆ. ಅಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಬೈಕ್ ಗಳು ನೀರಿನಲ್ಲಿ ತೇಲಾಡುತ್ತಿವೆ. ಕಲ್ಯಾಣ ಮಂಟಪಕ್ಕೆ ನೀರು ಹೊಕ್ಕ ಪರಿಣಾಮ ಕುರ್ಚಿಗಳೆಲ್ಲ ನೀರಿನಲ್ಲಿ ತೇಲಾಡುತ್ತಿವೆ.