ವಿಜಯಸಾಕ್ಷಿ ಸುದ್ದಿ, ಮೈಸೂರು
ಲಾಕ್ ಡೌನ್ ನಿಂದಾಗಿ ಜನರು ಅನುಭವಿಸುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ತಂದೆಯೊಬ್ಬರು ಮಗನಿಗಾಗಿ ಮಗನ ಔಷಧಿಗಾಗಿ ಬರೋಬ್ಬರಿ 280 ಕಿ.ಮೀಟರ್ ಸೈಕಲ್ ತುಳಿದು ಬಂದಿರುವ ಮನಕಲುಕುವ ಘಟನೆ ವರದಿಯಾಗಿದೆ.
ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಗಾಣಿಗನಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಮಹಾನ್ ತಂದೆ ಮಗನಿಗಾಗಿ ಬರೋಬ್ಬರಿ ಮೂರು ದಿನಗಳ ಕಾಲ ಸೈಕಲ್ ತುಳಿದಿದ್ದಾರೆ. ಗಾರೆ ಕೆಲಸಗಾರ ಮಾಡುತ್ತಿದ್ದ ಆನಂದ್ ಎಂಬ ವ್ಯಕ್ತಿಯಿಂದಲೇ ಈ ಸಾಹಸ ನಡೆದಿದೆ.
ಇವರು ತಮ್ಮ ಮಗನಿಗಾಗಿ ನೂರಾರು ಕಿ.ಮೀ ಸೈಕಲ್ ತುಳಿದು ಔಷಧಿ ತಂದಿದ್ದಾರೆ. ಇವರ ಮಗ ಮಾನಸಿಕ ವಿಶೇಷ ಚೇತನನಾಗಿದ್ದ. ಹೀಗಾಗಿ ಈ ಮಗುವಿಗೆ 10 ವರ್ಷಗಳಿಂದ ಮಾತ್ರ ತೆಗೆದುಕೊಳ್ಳುತ್ತಿದ್ದ. ಅವರ ಮಗನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಒಮ್ಮೆ ಮಾತ್ರೆ ತಪ್ಪಿದರೆ ಮತ್ತೆ 18 ವರ್ಷಗಳ ಕಾಲ ನಿರಂತರ ಮಾತ್ರೆ ನೀಡಬೇಕು.
ಆದರೆ, ಆತನ ಔಷಧಿ ಮನೆಯಲ್ಲಿ ಖಾಲಿಯಾಗಿತ್ತು. ಆದರೆ, ಮಾತ್ರೆ ತರಬೇಕು ಎಂದರೆ ಲಾಕ್ ಡೌನ್ ಅಡ್ಡವಾಗಿದೆ. ಲಾಕ್ ಡೌನ್ ನಿಂದಾಗಿ ವಾಹನ ಸೌಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ತಂದೆ ಸೈಕಲ್ ಏರಿದ್ದಾರೆ. ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ನಂತರ ಅಲ್ಲಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ತೆರಳಿ ಮಾತ್ರೆ ಪಡೆದು ತಂದಿದ್ದಾರೆ. ಈ ತಂದೆ ಪ್ರತಿ ದಿನ 70 ಕಿ.ಮೀ ಸೈಕಲ್ ತುಳಿದು ಔಷಧಿ ತಂದಿದ್ದಾರೆ.
ಈ ಔಷಧಿ ನಿಮ್ಹಾನ್ಸ್ ಹೊರತು ಪಡಿಸಿದರೆ, ಬೇರೆಲ್ಲೂ ಸಿಗುವುದಿಲ್ಲ. ನಿಮ್ಹಾನ್ ಗೆ ತೆರಳಲು ಸುತ್ತಮುತ್ತಲ ಜನರ ಬಳಿ ಇವರು ಬೈಕ್ ಕೇಳಿದ್ದಾರೆ. ಒಂದು ದಿನ ಮಾತ್ರ ತಪ್ಪಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ ಬೈಕ್ ಕೊಡಿ ಎಂದು ಅಂಗಲಾಚಿದ್ದಾರೆ. ಆದರೆ, ಯಾರೂ ಮಾನವೀಯತೆ ಮೆರೆಯುವ ಪ್ರಯತ್ನ ಮಾಡಿಲ್ಲ. ಹೀಗಾಗಿಯೇ ಇವರೇ ಸೈಕಲ್ ಏರಿ ಮಗನಿಗೆ ಔಷಧಿ ತಂದಿದ್ದಾರೆ.