ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಕೊರೊನಾ ದೇಶಕ್ಕೆ ಕಾಲಿಟ್ಟ ದಿನದಿಂದಲೂ ವೈದ್ಯರು ಜೀವದ ಹಂಗು ತೊರೆದು ಹಗಲಿರುಳು ಸೇವೆ ಮಾಡುತ್ತಿದ್ದಾರೆ. ಅಪಾಯವಿದೆ ಎಂದು ತಿಳಿದಿದ್ದರೂ ಯಾವುದನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ತಮ್ಮ ಜೀವ ಅಷ್ಟೇ ಅಲ್ಲ, ತಮ್ಮ ಕುಟುಂಬಸ್ಥರ ಜೀವವನ್ನು ಪಣಕ್ಕಿಟ್ಟು ಅವರು ಮಹಾಮಾರಿಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಹೀಗೆ ಸೇವೆ ಮಾಡುತ್ತ ಹಲವರು ವೈದ್ಯರು ಇಹಲೋಕ ಕೂಡ ತ್ಯಜಿಸಿದ್ದಾರೆ. ಹೀಗೆ ಬೆಳಗಾವಿ ಚಿಲ್ಡ್ರನ್ಸ್ ಪ್ರೈವೆಟ್ ಲಿಮಿಟೆಡ್ ಆಸ್ಪತ್ರೆಯಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಜೊತೆಗೆ ಅವರ ತಾಯಿಯು ಮೃತಪಟ್ಟಿದ್ದಾರೆ.
ವೈದ್ಯ ಹಾಗೂ ತಾಯಿ ಕೇವಲ ನಾಲ್ಕು ದಿನಗಳ ಅಂತರದಲ್ಲಿಯೇ ಮಹಾಮಾರಿಗೆ ಬಲಿಯಾಗಿದ್ದಾರೆ. ಡಾ.ಮಹೇಶ್ ಪಾಟೀಲ್ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ ಅದಕ್ಕೆ ಬಲಿಯಾಗಿದ್ದಾರೆ. ಅವರಿಗೆ ಒಂದೂವರೆ ವರ್ಷದ ಹೆಣ್ಣು ಮಗು ಹಾಗೂ ಪತ್ನಿ ಇದ್ದರು.
ಅವರ ತಾಯಿ ಸುಮಿತ್ರಾ ಪಾಟೀಲ್ ಮೃತಪಟ್ಟಿದ್ದಾರೆ. ಇದೀಗ ಅನಾರೋಗ್ಯದಿಂದ ತಂದೆ ಕಲಗೌಡ ಪಾಟೀಲ್ ಹಾಸಿಗೆ ಹಿಡಿದಿದ್ದಾರೆ. ಕೊವಿಡ್ ಸೋಂಕಿತ ಮಗುವಿಗೆ ಚಿಕಿತ್ಸೆ ನೀಡಿದ್ದ ಡಾ. ಮಹೇಶ್ ಪಾಟೀಲ್ ಅವರಿಗೆ ಸೋಂಕು ತಗುಲಿತ್ತು. ಹೀಗಾಗಿ ಅವರು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಗ ಡಾ. ಮಹೇಶ್ ಅವರ ತಂದೆ ಹಾಗೂ ತಾಯಿಗೂ ಸೋಂಕು ಹರಡಿತ್ತು. ಉಸಿರಾಟದ ತೊಂದರೆಯಿಂದ ಮೊದಲು ಮಹೇಶ್ ಆಸ್ಪತ್ರೆಗೆ ದಾಖಲಾಗಿದ್ದರು. ಮಗ ದಾಖಲಾದ ಎರಡೇ ದಿನಕ್ಕೆ ಮತ್ತೊಂದು ಆಸ್ಪತ್ರೆಗೆ ತಾಯಿ ಸುಮಿತ್ರಾ ಪಾಟೀಲ್ ದಾಖಲಾಗಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಸುಮಿತ್ರಾ ಕೊನೆಯುಸಿರೆಳೆದಿದ್ದರು. ತಾಯಿ ಸಾವನ್ನಪ್ಪಿದ ನಾಲ್ಕು ದಿನಕ್ಕೆ ಮಗ ಡಾ.ಮಹೇಶ್ ಪಾಟೀಲ್ (37) ಸಾವನ್ನಪ್ಪಿದ್ದಾರೆ. ಆದರೆ, ತಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ಕೊರೊನಾಗೆ ಬಲಿಯಾದರೂ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಮಾತ್ರ ವೈದ್ಯರ ಕುಟುಂಬಕ್ಕೆ ನೆರವಿಗೆ ಬಂದಿಲ್ಲ.