ವಿಜಯ ಸಾಕ್ಷಿ ಸುದ್ದಿ, ಬೆಂಗಳೂರು
ನಟ ದರ್ಶನ್ ಅವರ ಮನವಿಗೆ ಅಭಿಮಾನಿಗಳು ಭರ್ಜರಿಯಾಗಿ ಸ್ಪಂದಿಸಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಸುಮಾರು ರೂ. 25 ಲಕ್ಷ ಹಣ ಕರ್ನಾಟಕ ಮೃಗಾಲಯಗಳಲ್ಲಿ ಸಂಗ್ರಹವಾಗಿದೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಮನುಷ್ಯರಿಗೆ ಉಂಟಾದ ತೊಂದರೆಯಂತೆ, ಪ್ರಾಣಿಗಳಿಗೂ ಉಂಟಾಗಿದೆ. ಹೀಗಾಗಿ ಮೃಗಾಲಯಗಳಲ್ಲಿ ಪ್ರಾಣಿಗಳ ಪೋಷಣೆ ಕಷ್ಟಕರವಾಗಿದೆ. ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುವುದರ ಮೂಲಕ ನೆರವಾಗಬೇಕು ಎಂದು ಡಿ ಬಾಸ್ ಮನವಿ ಮಾಡಿದ್ದರು.
ಅವರು ಮನವಿ ಮಾಡಿದ್ದೇ ತಡ. ಅವರ ಅಭಿಮಾನಿಗಳ ಕೈ ಜೋಡಿಸಿದ್ದಾರೆ. ಹೀಗಾಗಿ ಎರಡೇ ದಿನಗಳಲ್ಲಿ ರೂ. 25 ಲಕ್ಷ ಸಂಗ್ರಹವಾಗಿದೆ. ಡಿ ಬಾಸ್ ಅಭಿಮಾನಿಗಳು ಹಾಗೂ ಪ್ರಾಣಿ ಪ್ರಿಯರು ರಾಜ್ಯದಲ್ಲಿನ 9 ಮೃಗಾಲಯಗಳಿಂದ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಬೆಳಗಾವಿ, ಗದಗ, ಕಲುಬುರ್ಗಿ, ದಾವಣಗೆರೆ, ಹಂಪಿ, ಚಿತ್ರದುರ್ಗ, ಬನ್ನೇರುಘಟ್ಟ, ಶಿವಮೊಗ್ಗ, ಮೈಸೂರಿನಲ್ಲಿ ಮೃಗಾಲಯಗಳಿಂದ ಸದ್ಯ ಜನರು ಸ್ವ ಇಚ್ಚೆಯಿಂದ ಪ್ರಾಣಿ ದತ್ತು ಪಡೆಯುತ್ತಿದ್ದಾರೆ.
ರೂ. 25 ಲಕ್ಷ ಮೌಲ್ಯದ ದತ್ತು ಸ್ವೀಕಾರ ಹಾಗೂ ದೇಣಿಗೆ ಸಂಗ್ರಹವಾಗಿದೆ ಎಂದು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ದರ್ಶನ್ ಅವರಿಗೆ ಕರ್ನಾಟಕ ಮೃಗಾಲಯ ಧನ್ಯವಾದ ಹೇಳಿದೆ.
ಮೃಗಾಯಲಗಳಿಂದ ಪ್ರಾಣಿಗಳನ್ನು ದತ್ತು ಪಡೆದವರ ಹೆಸರು ಮತ್ತು ಮಾಹಿತಿಯನ್ನು ಪ್ರಮಾಣಪತ್ರದ ಸಮೇತ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ನಟ ದರ್ಶನ್ ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದ ತಿಳಿಸುತ್ತಿದ್ದಾರೆ.