ವಿಜಯಸಾಕ್ಷಿ ಸುದ್ದಿ ಗಂಗಾವತಿ
ಮಾರುಕಟ್ಟೆಯಿಂದ ಗ್ರಾಮಕ್ಕೆ ತೆರಳುತ್ತಿದ್ದ ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುಕ್ಕುಂಪಿ ಕ್ರಾಸ್ ಬಳಿ ನಡೆದಿದೆ.

ಫಕೀರಪ್ಪ ನಾಗಪ್ಪ ಹೊಳೆಯಾಚೆ, ಭೀಮಣ್ಣ ಚಿನ್ನಪ್ಪ ಹ್ಯಾಟಿ ಹಾಗೂ ರಾಮಣ್ಣ ಶಂಕ್ರಪ್ಪ ಡೊಳ್ಳಿ ಎಂಬುವವರು ಸಾವನ್ನಪ್ಪಿದ್ದು, ಇವರೆಲ್ಲ ಕೊಪ್ಪಳ ತಾಲೂಕಿನ ಬೂದಗುಂಪಾ ಗ್ರಾಮದವರಾಗಿದ್ದಾರೆ.
ಘಟನೆಯಲ್ಲಿ ಮಂಜುನಾಥ ಮುದಿಯಪ್ಪ ಜಬ್ಬಲಗುಡ್ಡ ಎಂಬ ಯುವಕ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜುನಾಥ್ ಅವರ ಹೊಲದಲ್ಲಿ ಬೆಳೆದಿದ್ದ ಶೇಂಗಾ ಕಟಾವು ಮಾಡಿಕೊಂಡು ಆಟೋದಲ್ಲಿ ಗಂಗಾವತಿ ಮಾರುಕಟ್ಟೆಗೆ ತೆರಳಿದ್ದರು. ಅಲ್ಲಿ ಧಾನ್ಯವನ್ನು ಅನ್ಲೋಡ್ ಮಾಡಿ ಊರಿನ ಕಡೆಗೆ ಸಾಗುತ್ತಿದ್ದರು. ಈ ವೇಳೆ, ಕೊಪ್ಪಳದಿಂದ ವೇಗವಾಗಿ ಬಂದ ಲಾರಿ ಆಟೋಗೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Trending Now



