ರೈಲ್ವೆ ಹಳಿಗೆ ಬಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ; ಸಾವಿನಲ್ಲಿ ಆಟೋ‌ ಚಾಲಕನ ಕೈವಾಡ?

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಆಕೆ ಪ್ಯಾರಾ ಮೆಡಿಕಲ್ ಓದುತ್ತಿದ್ದ ಯುವತಿ. ಆದರೆ ಆಟೋ ಚಾಲಕನನ್ನು ಪ್ರೀತಿ ಮಾಡುತ್ತಿದ್ದಳು. ಆತನನ್ನು ನಂಬಿ ಮನಸ್ಸು ಹಾಗೂ ದೇಹ ಎರಡನ್ನೂ ಅರ್ಪಿಸಿದ್ದ ಯುವತಿ, ಮದುವೆ ಮಾಡಿಕೊಳ್ಳೋಣ ಎಂದಿದ್ದೇ ತಡ, ಹುಡುಗ ಉಲ್ಟಾ ಹೊಡೆದಿದ್ದಾನೆ. ನಾ ಆಕೆಯನ್ನ ಪ್ರೀತಿನೇ ಮಾಡಿಲ್ಲ ಅಂತ ಮಾತು ಬದಲಿಸಿದ್ದನಂತೆ. ಆದರೂ ಸೋಮವಾರ ತಾನು ಸಾಯುವ ಮುನ್ನ ಈ ಯುವತಿ ತನ್ನನ್ನು ತಿರಸ್ಕರಿಸಿದ್ದ ಯುವಕನೊಂದಿಗೆ ಕಾಲ ಕಳೆದಿದ್ದಳು. ಕೊನೆಗೆ ಶವವಾಗಿ ಪತ್ತೆಯಾಗಿದ್ದಾಳೆ. ಈಕೆಯ ಸಾವಿನಲ್ಲಿ ಪ್ರಿಯಕರನ ಕೈವಾಡ ಇದೆ ಎಂದು ಯುವತಿಯ ಪೋಷಕರು ಆರೋಪ ಮಾಡುತ್ತಿದ್ದಾರೆ.

ರಾಜೀವ್ ಗಾಂಧಿ ನಗರದ ನಿವಾಸಿ ಪಲ್ಲವಿ ಯಲ್ಲಪ್ಪ ಗೊಲ್ಲರ (19) ಎಂಬ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಗದಗ ತಾಲೂಕಿನ ಕಣಗಿನಹಾಳ ರೈಲ್ವೇ ನಿಲ್ದಾಣದ ಬಳಿ ಹಳಿಯ ಪಕ್ಕದಲ್ಲಿ ಮೈತುಂಬ ಗಾಯಗಳಿರುವ ಸ್ಥಿತಿಯಲ್ಲಿ ಅವಳ ಮೃತದೇಹ ಪತ್ತೆಯಾಗಿದೆ. ಆದರೆ ಸಾವಿನ ಬಗ್ಗೆ ಯುವತಿಯ ಹೆತ್ತವರು, ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಶವಾಗಾರದ ಮುಂದೆ ಜಮಾಯಿಸಿದ್ದ ಪೋಷಕರು, `ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯನ್ನ ಕೊಲೆ ಮಾಡಲಾಗಿದೆ. ಪ್ರಕಾಶ್ ಮುಂಡೆವಾಡಗಿ ಎಂಬಾತನೇ ಆಕೆಯನ್ನ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ’ ಎಂದು ಆರೋಪ ಮಾಡಿದ್ದಾರೆ.

ಈ ಯುವತಿ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯಾಗಿದ್ದು, ಮೂರು ವರ್ಷಗಳಿಂದ ರಾಜೀವ್ ಗಾಂಧಿ ನಗರದ ನಿವಾಸಿ, ಆಟೋ ಚಾಲಕ ಪ್ರಕಾಶ್ ಮುಂಡೆವಾಡಗಿ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳು. ಆಕೆಯನ್ನು ಪುಸಲಾಯಿಸಿ ದೇಹ ಸಂಬಂಧವನ್ನೂ ಬೆಳೆಸಿದ್ದ. ಮದುವೆ ಮಾಡಿಕೊ ಎಂದಾಗ ಆತ ತಿರಸ್ಕಿದ್ದನಂತೆ. 20 ದಿನಗಳ ಹಿಂದೆ ರಾಜೀವ್ ಗಾಂಧಿ ನಗರದ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯತಿ ನಡೆದಿತ್ತು. ಮುಚ್ಚಳಿಕೆ ಪತ್ರದ ಮೂಲಕ ರಾಜೀ ಮಾಡಿಸಿ, ಒಬ್ಬರಿಗೊಬ್ಬರು ಮತ್ತೆ ತಂಟೆಗೆ ಬರದಂತೆ ತಾಕೀತು ಮಾಡಿ ಕಳಿಸಲಾಗಿತ್ತಂತೆ.

ಆತ್ಮಹತ್ಯೆ ಅನ್ನುತ್ತಾರೆ ಪೊಲೀಸರು!

ಆದ್ರೆ ಸೋಮವಾರ ಮನೆಗೆ ಬಂದು ಹೊಸ ಬಟ್ಟೆ ಹಾಕಿಕೊಂಡು, ಕೈಕೊಟ್ಟಿದ್ದ ಪ್ರಿಯಕರ ಪ್ರಕಾಶನ ಜೊತೆಗೆ ಮತ್ತೆ ಹೋಗಿದ್ದಳು. ಅಲ್ಲಿ ಏನೋ ಗಲಾಟೆ ನಡೆದು ಈಕೆಯ ಕೊಲೆ ಆಗಿದೆ ಅಂತ ತಂದೆ-ತಾಯಿ ಆರೋಪ ಮಾಡ್ತಿದ್ದಾರೆ. ಈ ಸಂಬಂಧ ಗದಗ ರೈಲ್ವೇ ಸ್ಟೇಷನ್ ನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಇದು ಕೊಲೆ ಅಲ್ಲ, ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ. ಆತ್ಮಹತ್ಯೆ ಆಗಿದ್ದರೂ ಅದಕ್ಕೊಂದು ಕಾರಣ ಇರಬೇಕಲ್ಲ? ಅದು ಏನು? ಕೊಲೆಯಾಗಿದ್ದರೆ ಯಾರು ಮಾಡಿದ್ದಾರೆ ಎಂದು ಪೊಲೀಸರು ತನಿಖೆ ನಡೆಸಿ, ಮೃತ ಯುವತಿಗೆ ನ್ಯಾಯ ದೊರಕಿಸುವಂತೆ ಆಕೆಯ ಬಂಧುಗಳು ಆಗ್ರಹಿಸಿದ್ದಾರೆ.

ನನ್ನ ಮಗಳು ಪ್ಯಾರಾಮೆಡಿಕಲ್ ಓದುತ್ತಿದ್ದಳು. ಆಟೋ ಚಾಲಕ ಪ್ರಕಾಶ್ ಅಲಿಯಾಸ್ ಪಾರು ಎಂಬುವನನ್ನು ಪ್ರೀತಿ ಮಾಡ್ತಿದ್ದಳು. ನಿನ್ನೆ ಅವನ ಜೊತೆಗೆ ಹೋಗಿದ್ದಳು. ಅಲ್ಲಿ ಇಬ್ಬರಿಗೂ ಮದುವೆ ವಿಚಾರವಾಗಿ ಗಲಾಟೆ ನಡೆದು ನನ್ನ ಮಗಳನ್ನ ಕೊಲೆ ಮಾಡಿದ್ದಾನೆ. ಆಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ.

ಯಲ್ಲಪ್ಪ ಗೊಲ್ಲರ್, ಯುವತಿ ತಂದೆ

ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯ ಸಾವಿಗೆ ಪ್ರಕಾಶ ಅನ್ನೋವನೆ ಕಾರಣ. ಆತನನ್ನ ನನ್ನ ಮಗಳು ಬಾಳ ಪ್ರೀತಿ ಮಾಡ್ತಿದ್ದಳು. ಆಕೆ ದೊಡ್ಡವಳಾಗೋವರೆಗೂ ಊರೂರು ಅಲೆದಾಡಿ ಆಕೆಯನ್ನ ಸಾಲಿಕಲಿಸೇನಿ. ಮದರ್ ಥೇರೆಸ್ ನ ಕಾಲೇಜ್ ನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಳು. ನಿನ್ನೆ ಜಳಕ ಮಾಡಿ ಹೋದವಳು ತಿರುಗಿಬಂದಿಲ್ಲ.

ಲಕ್ಷ್ಮಿ, ಯುವತಿಯ ತಾಯಿ

Spread the love

LEAVE A REPLY

Please enter your comment!
Please enter your name here