ವಿಜಯಸಾಕ್ಷಿ ಸುದ್ದಿ, ಹೂವಿನಹಡಗಲಿ
ಕೊರೊನಾ ಸಮಯದಲ್ಲಿಯೂ ಜನರು ತಮ್ಮ ನಂಬಿಕೆಯ ಮೊರೆ ಹೋಗುತ್ತಿದ್ದಾರೆ. ತಾಲೂಕಿನ ಮಿರಾಕೊರನಹಳ್ಳಿ ಹಾಗೂ ವಿನೋಬನಗರ ಗ್ರಾಮದ ಜನರು ಮಹಾಮಾರಿ ತೊಲಗಲೆಂದು ದೇವರ ಮೊರೆ ಹೋದ ದೃಶ್ಯ ಕಂಡು ಬಂದಿದೆ.
ಒಂದೆಡೆ ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ ಡೌನ್ ವಿಧಿಸಿದ್ದರೆ, ಇತ್ತ ಜನರು ನಂಬಿಕೆಯ ಮೊರೆ ಹೋಗುತ್ತಿದ್ದಾರೆ. ಅದೇ ರೀತಿ ಇಲ್ಲಿಯ ಜನರು ದೇವಿಯ ಮೊರೆ ಹೋಗಿದ್ದಾರೆ. ಗ್ರಾಮದಲ್ಲಿನ ಪ್ರತಿಯೊಂದು ಕುಟುಂಬಸ್ಥರು ಗ್ರಾಮಗಳ ಗಡಿಯಾಚೆ ಇರುವ ದೇವಿಯ ಮರಕ್ಕೆ ಮಡಿಯಿಂದ ಹೋಳಿಗೆ ಮಾಡಿಕೊಂಡು ಪಾದಯಾತ್ರೆಯ ಮೂಲಕ ಹೂವು, ಹಣ್ಣು, ಕಾಯಿ ತೆಗೆದುಕೊಂಡು ಹೋಗಿ ಶ್ರೀದೇವಿ ನಿನ್ನಾಲ ಉದೋ ಉದೋ ಎನ್ನುತ್ತ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
25 ವರ್ಷಗಳಿಂದ ಮಹಾನ್ ಶರಣ ಶರಣ ಬಸವೇಶ್ವರ ಸ್ವಾಮಿಯ ಮಹಾ ಪುರಾಣ ನಡೆಸಿಕೊಂಡು ಬಂದ ಇತಿಹಾಸ ಈ ಎರಡೂ ಗ್ರಾಮಗಳದ್ದಾಗಿದೆ. ಜನರು ಶರಣ ಬಸವನ ಆಶೀರ್ವಾದದಿಂದಲೇ ಊರಲ್ಲಿ ಉತ್ತಮ ಮಳೆ, ಬೆಳೆ ಬರುತ್ತಿದೆ ಎಂದೇ ಭಾವಿಸಿದ್ದರು. ಸದ್ಯ ಕೊರೊನಾ ತೊಲಗಿಸಲು ದೇವಿಯ ಮೊರೆ ಹೋಗಿದ್ದಾರೆ. ದೇವಿಗೆ ಹರಿಕೆ ತೀರಿಸಿ, ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಿದ್ದಾರೆ.
ಮಹಾಮಾರಿ ತೊಲಗಲಿ ಎಂದು ನಾವೆಲ್ಲರೂ ಹೋಳಿಗೆ, ಹೂವು, ಕಾಯಿ, ಹಣ್ಣು ಎಡೆ ಮಾಡಿ ದೇವಿಯ ಸನ್ನಿಧಿಗೆ ಹೋಗಿ ಪ್ರಾರ್ಥಿಸಿಕೊಂಡಿದ್ದೇವೆ. ನಾವು ದೇವರನ್ನು ನಂಬುತ್ತೇವೆ. ದೇವಿಯು ನಮ್ಮ ಪ್ರಾರ್ಥನೆ ಮನ್ನಿಸಿ, ಕೊರೊನಾ ತೊಲಗಿಸುತ್ತಾಳೆ ಎಂದು ಗ್ರಾಮದ ಜಿ. ಬಸವರಾಜ, ಪಿ.ಎಂ. ಕೊಟ್ಟಯ್ಯಸ್ವಾಮಿ ಸೇರಿದಂತೆ ಮುಖಂಡರು ಹೇಳುತ್ತಿದ್ದಾರೆ.