ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಅಥಣಿಯ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಹಾಗೂ ಕಚೇರಿಯ ಮ್ಯಾನೇಜರ್ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಇಇ ರಾಜೇಂದ್ರ ಇಂದ್ರಪ್ಪ ಪರಣಾಕರ ಹಾಗೂ ಮ್ಯಾನೇಜರ್ ದೀಪಕ ಕೃಷ್ಣಾಜಿ ಕುಲಕರ್ಣಿ ಇವರು ಇಲಾಖೆಯ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಕಾಮಗಾರಿ ಗುತ್ತಿಗೆ ಪಡೆದ ಬೆಳಗಾವಿಯ ಗುತ್ತಿಗೆದಾರರೊಬ್ಬರಿಂದ ಶೇ.3 ರಷ್ಟು ಅಂದರೆ, 68,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತು ಗುತ್ತಿಗೆದಾರ ಎಸಿಬಿಗೆ ದೂರು ನೀಡಿದ್ದರು. ದೂರಿನ ಅನ್ವಯ ಇಂದು ಲಂಚದ ಹಣ ಸ್ವೀಕರಿಸುವಾಗ ಎಸಿಬಿ ಎಸ್ಪಿ ಬಿ.ಎಸ್. ನ್ಯಾಮಗೌಡರ ಮಾರ್ಗದರ್ಶನ, ಡಿವೈಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ, ಸುನಿಲಕುಮಾರ ಹಾಗೂ ಸಿಬ್ಬಂದಿ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದಿರುವ ಎಸಿಬಿ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.