ವಿಜಯಸಾಕ್ಷಿ ಸುದ್ದಿ, ಭೋಪಾಲ್
ಸರ್ಕಾರ ಎಷ್ಟೇ ಸೂಚಿಸಿದರು ಹಾಗೂ ತಿಳುವಳಿಕೆ ಮೂಡಿಸಿದರೂ ಜನರು ಮಾತ್ರ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹಲವು ಗಿಫ್ಟ್ ಗಳ ಆಮಿಷವೊಡ್ಡಿದರೂ ಹಲವು ಕಡೆ ಲಸಿಕೆ ಹಾಕಿಸುವಂತೆ ಜನರನ್ನು ಪ್ರೇರೇಪಿಸಲಾಗುತ್ತಿದೆ. ಆದರೆ, ಮಧ್ಯಪ್ರದೇಶದ ಛಿಂದ್ವಾಡಾ ಸಲೂನ್ ಮಾಲೀಕರು ಕೊರೊನಾ ಲಸಿಕೆ ಪಡೆದುಕೊಳ್ಳದವರಿಗೆ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್ ಮಾಡಬಾರದಂತೆ ನಿರ್ಧರಿಸಿದ್ದಾರೆ.
ಕೊರೊನಾ ಲಸಿಕೆ ಪಡೆಯದವರಿಗೆ ಕ್ಷೌರ ಸೇರಿದಂತೆ ಯಾವುದೇ ಸೇವೆಗಳನ್ನು ನೀಡಲ್ಲ. ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಅಥವಾ ಮೆಸೇಜ್ ತೋರಿಸಿದ ಮೇಲೆಯೇ ಸೇವೆ ಒದಗಿಸಲು ನಿರ್ಧರಿಸಿದ್ದಾರೆ. ಕೊರೊನಾ ಲಸಿಕೆ ಅಭಿಯಾನಕ್ಕೆ ನಾವು ಸಾಥ್ ನೀಡಿದ್ದೇವೆ ಎಂದು ಸಲೂನ್ ಮಾಲೀಕರು ಹೇಳಿದ್ದಾರೆ.
ಕ್ಷೌರ ಮಾಡುವಾಗ ಗ್ರಾಹಕರ ಸಮೀಪಕ್ಕೆ ಹೋಗಬೇಕಾಗುತ್ತದೆ. ಇದರಿಂದಾಗಿ ನಮಗೂ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮಾಲೀಕರು ಹೇಳಿದ್ದಾರೆ.