ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿ ಮಹಾಮಾರಿಯ ಬಲಿ ಎಗ್ಗಿಲ್ಲದೆ ನಡೆಯುತ್ತಿದೆ. ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾದರೂ ಸಾವಿನ ಸಂಖ್ಯೆ ಮಾತ್ರ ಇಳಿಯುತ್ತಿಲ್ಲ. ಹೀಗಾಗಿ ಲಾಕ್ ಡೌನ್ ಜೂ. 7ರ ನಂತರವೂ ಮುಂದುವರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸದ್ಯದ ಸ್ಥಿತಿ ಕಂಡರೆ ಜೂ. 7ಕ್ಕೆ ಲಾಕ್ ಡೌನ್ ತೆರೆಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಈ ಹಿಂದೆ ಮೊದಲ ಅಲೆಯಲ್ಲಿ ಇಡೀ ಭಾರತ ಬರೋಬ್ಬರಿ 75 ದಿನಗಲ ಕಾಲ ಲಾಕ್ ಆಗಿತ್ತು. ಆದರೆ, ಸದ್ಯ ಒಂದು ವರ್ಷದ ಕೇಸ್ ಗಳು ಕೇವಲ 2 ತಿಂಗಳಲ್ಲಿಯೇ ಕಾಡಲು ಶುರು ಮಾಡಿವೆ. ಇಂತಹ ಪರಿಸ್ಥಿತಿಯಲ್ಲಿ ಇಷ್ಟು ದಿನಗಳಲ್ಲಿಯೇ ಲಾಕ್ ಮಾಡಲು ಆಗುವುದಿಲ್ಲ. ಒಂದು ವೇಳೆ ರಾಜ್ಯವನ್ನು ಅನ್ ಲಾಕ್ ಮಾಡಿದರೆ, ಮತ್ತಷ್ಟು ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.
ಇನ್ನೊಂದೆಡೆ ಸರ್ಕಾರದ ಮುಂದೆಯೂ ಜೂ. 7ರ ನಂತರ ಲಾಕ್ ಡೌನ್ ಮುಂದುವರೆಸುವ ಚಿಂತನೆ ಇದೆ ಎನ್ನಲಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಕ್ಷೀಣವಾಗುತ್ತಿದ್ದರೂ ಸಾವಿನ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳ ಕಂಡು ಬರುತ್ತಿದೆ.
ಬೆಂಗಳೂರು ಒಂದರಲ್ಲಿಯೇ ಆಸ್ಪತ್ರೆಗೆ ದಾಖಲಾಗಿರುವ ಶೇ. 70ರಷ್ಟು ಜನ ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖರಾಗುವ ಪರಿಸ್ಥಿತಿ ತುಂಬಾ ಕಡಿಮೆ ಇದೆ. ಇದನ್ನೆಲ್ಲ ಗಮನಿಸಿಯೇ ತಜ್ಞರು ಲಾಕ್ ಡೌನ್ ಯಾವಾಗ ತೆರುವುಗೊಳಿಸಬೇಕು ಎಂಬುವುದರ ಕುರಿತು ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ.
ಸೋಂಕಿನ ಪ್ರಮಾಣ ಶೇ. 5ಕ್ಕೆ ಇಳಿಯದ ಹೊರತು ಲಾಕ್ ಡೌನ್ ತೆರೆಯಬಾರದು ಎಂದು ಐಸಿಎಂಆರ್ ಹೇಳಿದೆ. ಸೋಂಕಿನ ಪ್ರಮಾಣ ಶೇ. 10ರಷ್ಟಿದ್ದರೆ ಸರ್ಕಾರ, ಲಾಕ್ ಡೌನ್ ಮುಂದುವರೆಸಬಹುದು. ಸೋಂಕಿನ ಪ್ರಮಾಣ ಶೇ. 8ಕ್ಕೆ ಇಳಿದರೆ ಲಾಕ್ ಡೌನ್ ನಿಂದ ಸ್ವಲ್ಪ ಸಡಿಲಿಕೆ ಸಾಧ್ಯವಾಗುತ್ತದೆ. ಸದ್ಯ ಹಳ್ಳಿ – ಹಳ್ಳಿಗಳಲ್ಲಿಯೂ ಸೋಂಕು ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಜ್ಞರ ಸಲಹೆಯಂತೆ ಸಚಿವರು ಕೂಡ ಲಾಕ್ ಡೌನ್ ತೆರೆಯದಂತೆ ಸಲಹೆ ನೀಡುತ್ತಿದ್ದಾರೆ.
ಒಂದು ವೇಳೆ ಸರ್ಕಾರ ಆರ್ಥಿಕ ಸ್ಥಿತಿಯಿಂದ ಚೇತರಿಸಿಕೊಳ್ಳಲು ಲಾಕ್ ಡೌನ್ ತೆರೆಯಲು ಮುಂದಾದರೆ, ಒಮ್ಮೆಲೆ ತೆರೆಯದಂತೆ ತಜ್ಞರು ಮನವಿ ಮಾಡಿದ್ದಾರೆ. ಜೂ. 7ರ ನಂತರ 14 ದಿನ ಅರ್ಧ ದಿನ ಲಾಕ್ ಡೌನ್ ಜಾರಿಗೆ ತನ್ನಿ. ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನದವರೆಗೆ ವಿನಾಯ್ತಿ ಕೊಡಿ. ನೈಟ್ ಕರ್ಫ್ಯೂ ಜಾರಿ ತನ್ನಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಹೀಗಾಗಿಯೇ ಸದ್ಯ ಸರ್ಕಾರ ಲಾಕ್ ಡೌನ್ ಮುಂದುವರೆಸಬೇಕೆ? ಅಥವಾ ಹಂತ ಹಂತವಾಗಿ ತೆರವುಗೊಳಿಸಬೇಕೆ? ಎಂಬ ಚರ್ಚೆಯಲ್ಲಿದೆ. ಆದರೆ, ಸದ್ಯದ ಪರಿಸ್ಥಿತಿ ಕಂಡರೆ ಜೂನ್ ಅಂತ್ಯದವರೆಗೂ ರಾಜ್ಯ ಲಾಕ್ ಆಗಬಹುದು ಎನ್ನಲಾಗುತ್ತಿದೆ.