ವಿಜಯಸಾಕ್ಷಿ ಸುದ್ದಿ, ಗದಗ
ಬ್ಯಾಂಕ್ ಅಕೌಂಟ್, ಪಿನ್, ಎಟಿಎಮ್ ಕಾರ್ಡ್ ಬ್ಲಾಕ್ ಆಗಿದೆ ಅಂತ ಯಾರಾದರೂ ಅಪರಿಚಿತರು ಕರೆ ಮಾಡಿದರೆ ಅವರಿಗೆ ಉತ್ತರ ನೀಡಬೇಡಿ ಅಂತ ಪೊಲೀಸರು ಎಷ್ಟೇ ಎಚ್ಚರಿಕೆ, ಜಾಗೃತಿ ನೀಡಿದರೂ ಜನ ಮಾತ್ರ ಅದರ ಗಮನ ಹರಿಸುತ್ತಿಲ್ಲ. ಅದರಲ್ಲೂ ವಿದ್ಯಾವಂತರೇ ಅರ್ಥಮಾಡಿಕೊಳ್ಳುತ್ತಿಲ್ಲ. ಇದಕ್ಕೆ ಉದಾಹರಣೆ ಲಕ್ಷ್ಮೇಶ್ವರನ ಖಾಸಗಿ ಉದ್ಯೋಗಿಯೊಬ್ಬ ಲಕ್ಷಾಂತರ ರೂ. ಕಳೆದುಕೊಂಡ ಪ್ರಕರಣ.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣದ ನಿವಾಸಿ ವಿಕಾಸ್ ಪಾಟೀಲ್ ಎಂಬುವವರಿಗೆ ಬೆಂಗಳೂರಿನ ಇಂಡಸ್ ಇಂಡ್ ಬ್ಯಾಂಕ್ ಕಷ್ಟ್ ಮರ್ ಕೇರ್ ನಿಂದ ಮಾತಾಡೋದು ಅಂತ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ನಿಮಗೆ ಲೋನ್ ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಮರುಳಾದ ವಿಕಾಸ್ ಪಾಟೀಲ್, ತಮ್ಮ ಜಕ್ಕಸಂದ್ರ ಶಾಖೆಯ ಅಕೌಂಟ್ ನಂಬರ್ ಕೊಟ್ಟಿದ್ದಾರೆ. ಅಕೌಂಟ್ ನಂಬರ್ ಕೊಟ್ಟಿದ್ದೇ ತಡ ಖದೀಮ ಅದರಲ್ಲಿದ್ದ ಸುಮಾರು 1ಲಕ್ಷ 29 ಸಾವಿರ ಡ್ರಾ ಮಾಡಿಕೊಂಡಿದ್ದಾನೆ.
ಜುಲೈ 11 ರಂದು 49 ಸಾವಿರದಂತೆ ಎರಡು ಸಲ ಹಾಗೂ 30 ಸಾವಿರ ರೂ.ಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಆನ್ಲೈನ್ ಮೂಲಕ ವಂಚಿಸಿ ಹಣ ಪಡೆದಿದ್ದಾನೆ. ಇದು ಒಂದು ವಾರದ ನಂತರ ವಿಕಾಸ್ ಪಾಟೀಲ್ ಗೆ ಗೊತ್ತಾಗಿದ್ದು, ವಂಚನೆ ಮಾಡಿದ ಆರೋಪಿಯನ್ನು ಪತ್ತೆ ಮಾಡಿ ಅಂತ ಲಕ್ಷ್ಮೇಶ್ವರ ಠಾಣೆಗೆ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.