ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ರಾಜು ದಖನಿ
ಇಲ್ಲಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಹೀಳಾ ರೋಗಿಯ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಕೃತ ಕಾಮಿಯಯನ್ನ ಹೆಡೆಮುರಿ ಕಟ್ಟುವಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿದ್ಯಾನಗರ ಇನ್ಸ್ಪೆಕ್ಟರ್ ಮಹಾಂತೇಶ ಹೂಳಿ ಯಶಸ್ಸು ಕಂಡಿದ್ದಾರೆ.

ಈ ಕುರಿತು ವಿಜಯಸಾಕ್ಷಿ ಪತ್ರಿಕೆ ಹಾಗೂ ವೆಬ್ ಸುದ್ದಿ ಪ್ರಕಟಿಸಿತ್ತು. ಈ ಸುದ್ದಿ ಗಮನಿಸಿದ ಪೊಲೀಸರು ಕಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ. 19ರಂದು ಆಂಧ್ರ ಮೂಲದ ಮಹಿಳೆಯೊಬ್ಬರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಲ್ಲಿಯ ಖ್ಯಾತ ವೈದ್ಯ ಡಾ. ಕ್ರಾಂತಿಕಿರಣ ಅವರ ಒಡೆತನದ ಬಾಲಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಆ ಸಂದರ್ಭದಲ್ಲಿ ಮಹಿಳೆಗೆ ಇದೇ ಆಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನ್ ಕೊಠಡಿಗೆ ವಾರ್ಡ್ ಬಾಯ್ ಕರೆದುಕೊಂಡು ಹೊಗಿದ್ದ. ಕೊಠಡಿಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ವಿಕೃತಿ ಮೆರೆದಿದ್ದ. ಕೃತ್ಯ ಬಯಲಿಗೆ ಬರುತ್ತಿದ್ದಂತೆ ಆರೋಪಿ ಅಶೋಕ, ಆಸ್ಪತ್ರೆಯಿಂದ ಪರಾರಿಯಾಗಿದ್ದ.

ಆದರೆ, ಪ್ರಕರಣದ ಜಾಡು ಬೆನ್ನು ಹತ್ತಿದ್ದ ವಿದ್ಯಾನಗರದ ಸೂಪರ್ ಕಾಪ್ ಮಹಾಂತೇಶ ಹೂಳಿ ಅವರು ಘಟನೆ ನಡೆದ ನಾಲ್ಕು ದಿನಗಳಲ್ಲಿಯೇ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಅಣ್ಣಿಗೇರಿ ಮೂಲದ ಅಶೋಕ ಹಲಗಿ ಎಂದು ಗುರುತಿಸಲಾಗಿದೆ. ಆದರೆ, ಆರೋಪಿಯ ಮುಖದ ಮೇಲೆ ಗಂಭೀರ ಸ್ವರೂಪದ ಗಾಯದ ಗುರುತುಗಳು ಪತ್ತೆಯಾಗಿವೆ. ಈ ಕುರಿತು ವಿಚಾರಿಸಿದಾಗ ಕಳೆದ ಎರಡು ದಿನಗಳ ಹಿಂದೆಯೇ ಬೈಕ್ ಮೆಲಿಂದ ಬಿದ್ದಿರುವ ಕುರಿತು ಆರೋಪಿ ಹೇಳಿದ್ದಾನೆ. ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಲು ಮುಂದಾಗದ ಆಸ್ಪತ್ರೆ ಸಿಬ್ಬಂದಿ, ಆಸ್ಪತ್ರೆಗೂ ಹಾಗೂ ಆತನಿಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.
ಖ್ಯಾತ ನರರೋಗ ತಜ್ಞ, ಸಮಾಜ ಪರ ಕಾಳಜಿ ಹೊಂದಿರುವ ಡಾಕ್ಟರ್ ಕ್ರಾಂತಿ ಕಿರಣ್ ಅವರು ಕಳೆದ ಹತ್ತು ವರ್ಷಗಳಿಂದ ಇಂತಹ ಘಟನೆ ಬಾಲಾಜಿ ಆಸ್ಪತ್ರೆಯಲ್ಲಿ ನಡೆದಿರಲಿಲ್ಲ. ಆದರೆ ಇಂತಹ ಘಟನೆ ಸಂಭವಿಸಿದಾಗ ಜನರಲ್ಲಿ ಸಹಜವಾಗಿಯೇ ಆತಂಕ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.