ವಿಜಯಸಾಕ್ಷಿ ಸುದ್ದಿ,ಕೊಪ್ಪಳ
ತಾಲೂಕಿನ ಗಬ್ಬೂರು ಗ್ರಾಮದ ಕ್ರೀಡಾಪಟು ಎರಿಸ್ವಾಮಿ ಹರಿಜನ ಅವರಿಗೆ ಕೊಪ್ಪಳದ ಡಿಆರ್ ಎಎಸ್ಐ ಚಂದ್ರಪ್ಪ ಶಿಡ್ಲಪ್ಪನವರ ಅವರು ಆರ್ಥಿಕ ಸಹಾಯ ನೀಡಿದರು.
ಕ್ರೀಡಾಪಟು ಎರಿಸ್ವಾಮಿ ಹರಿಜನ ಅವರ ಕುರಿತು ಪತ್ರಿಕಾ ವರದಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡ ಸುದ್ದಿ ನೋಡಿದ ಚಂದ್ರಪ್ಪ ಅವರು ಗಬ್ಬೂರು ಗ್ರಾಮಕ್ಕೆ ತೆರಳಿ ಎರಿಸ್ವಾಮಿ ತಾಯಿಗೆ 15 ಸಾವಿರ ರೂಪಾಯಿ ನಗದು ನೀಡಿ ಶುಭ ಕೋರಿದರು.
ಗದಗ ನಗರದ ಶ್ರೀ ಪ್ರಭುರಾಜೇಂದ್ರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಪಿ.ಈಡಿ ಓದುತ್ತಿರುವ ಎರಿಸ್ವಾಮಿ ರಾಷ್ಟ್ರಮಟ್ಟದ ಥ್ರೋಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾನೆ. ಇದೇ ಅಕ್ಟೋಬರ್ 29ರಿಂದ 31ರವರೆಗೆ ಹರಿಯಾಣ ರಾಜ್ಯದ ರೋಥಕ್ ಎಂ.ಡಿ. ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸೀನಿಯರ್ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಇದೇ ಅಕ್ಟೋಬರ್ 25 ರಿಂದ 29 ರವರೆಗೆ ಎರಿಸ್ವಾಮಿಗೆ ಪರೀಕ್ಷೆಗಳಿವೆ. ಹಾಗಾಗಿ ಟೀಮ್ನೊಂದಿಗೆ ಹರಿಯಾಣಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಮುಗಿಸಿಕೊಂಡು ಸ್ವಂತ ಖರ್ಚಿನಲ್ಲಿ ಹೋಗಬೇಕೆಂದರೆ ಆರ್ಥಿಕ ಸಮಸ್ಯೆ ಎದುರಾಗಿದೆ. ಇದನ್ನು ಗಮನಿಸಿದ ಚಂದ್ರಪ್ಪ ಅವರು ಆರ್ಥಿಕ ಸಹಾಯ ನೀಡಲು ಮುಂದೆ ಬಂದರು.
ಕಷ್ಟದಿಂದಲೇ ಮೇಲೆ ಬಂದ ಚಂದ್ರಪ್ಪ ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಹಲವಾರು ಜನರಿಗೆ ವೈಯಕ್ತಿಕ ಸಹಾಯ ಮಾಡಿದ ಅವರು ಗಿಣಿಗೇರಿ ಕೆರೆ ಅಭಿವೃದ್ಧಿಗೆ 21 ಸಾವಿರ ರೂಪಾಯಿ ದೇಣಿಗೆ ನೀಡಿದ್ದರು. ಕ್ರೀಡಾಪಟು ಎರಿಸ್ವಾಮಿಗೆ ಆರ್ಥಿಕ ಸಹಾಯ ಮಾಡಿದ್ದಕ್ಕೆ ಗಬ್ಬೂರು ಗ್ರಾಮಸ್ಥರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಯಾರಾದರೂ ಆರ್ಥಿಕ ಸಹಾಯ ಮಾಡುವವರಿದ್ದರೆ ಎರಿಸ್ವಾಮಿ (9741 169676) ಅವರನ್ನು ಸಂಪರ್ಕಿಸಬಹುದು.
ಈ ಸಂದರ್ಭದಲ್ಲಿ ಗಾಯಕ ಅಮರೇಶ್ ಜವಳಿ, ಸಂಗೊಳ್ಳಿ ರಾಯಣ್ಣ ಸೇನೆ ತಾಲೂಕು ಅಧ್ಯಕ್ಷ ಕುಬೇರ ಮಜ್ಜಿಗಿ, ಯುವ ಮುಖಂಡರಾದ ವೈ.ಎಂ. ಕೋಲ್ಕಾರ್, ಬಸವರಾಜ ಹಳ್ಳಿ ಶರಣಪ್ಪ ದೊಡ್ಮನಿ ಉಪಸ್ಥಿತರಿದ್ದರು.