ಕಸಾಪ ಜಿಲ್ಲಾಧ್ಯಕ್ಷರಾಗಿ ವಿವೇಕಾನಂದಗೌಡ ಪಾಟೀಲ್ ಆಯ್ಕೆ: ಅಭ್ಯರ್ಥಿಗಳ ಮತಗಳ ವಿವರ
ವಿಜಯಸಾಕ್ಷಿ ಸುದ್ದಿ, ಗದಗ;
ಕನ್ನಡ ಸಾಹಿತ್ಯ ಪರಿಷತ್ ಗದಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಂದು (ಭಾನುವಾರ) ಶಾಂತಿಯುತ ಮತದಾನ ನಡೆದಿದ್ದು, ಒಟ್ಟು 2231 ಮತಗಳನ್ನು ಪಡೆಯುವ ಮೂಲಕ ವಿವೇಕಾನಂದಗೌಡ ಪಾಟೀಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಿಶನ್ ಕಲಾಲ್ ಅವರು ಘೋಷಿಸಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಡಾ.ಶರಣು ಗೋಗೇರಿ, ಸಂಗಮೇಶ ತಮ್ಮನಗೌಡರ , ಐ.ಕೆ.ಕಮ್ಮಾರ ಅವರು ಸೋಲಿನ ಕಹಿ ಅನುಭವಿಸಿದ್ದು, ಜಿಲ್ಲೆಯಾದ್ಯಂತ ಅಬ್ಬರದ ಪ್ರಚಾರ ನಡೆಸಿದ್ದ ವಿವೇಕಾನಂದಗೌಡ ಪಾಟೀಲ್ ಹಾಗೂ ಶರಣು ಗೋಗೇರಿ ಅವರ ಮಧ್ಯೆ ನೇರ ಹಣಾಹಣಿ ನಡೆಯಿತು.
ಒಟ್ಟು ಜಿಲ್ಲೆಯ 10 ಮತಗಟ್ಟೆಗಳಲ್ಲಿ 4052 ಮತಗಳು ಚಲಾವಣೆ ಆಗಿದ್ದು, ಅದರಲ್ಲಿ 28 ಮತಗಳು ತಿರಸ್ಕೃತಗೊಂಡಿವೆ. ಶೇ.67ರಷ್ಟು ಮತದಾನ ನಡೆದಿತ್ತು.
ಗೆಲುವು ಸಾಧಿಸಿರುವ ವಿವೇಕಾನಂದಗೌಡ ಪಾಟೀಲ್ 2231, ಡಾ.ಶರಣು ಗೋಗೇರಿ 1666, ಡಾ.ಸಂಗಮೇಶ ತಮ್ಮನಗೌಡರ 67 ಹಾಗೂ ಐ.ಕೆ.ಕಮ್ಮಾರ ಅವರು 60 ಮತಗಳನ್ನು ಪಡರದಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ಇದೇ ಮೊದಲ ಬಾರಿಗೆ ಕಸಾಪ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿವೇಕಾನಂದಗೌಡ ಪಾಟೀಲ್ ಅವರು ಗದಗ ತಾಲ್ಲೂಕು ಒಂದರಲ್ಲೇ 415 ಮತಗಳ ಮುನ್ನಡೆ ಸಾಧಿಸಿದ್ದು, ನರಗುಂದ, ನರೇಗಲ್ , ಲಕ್ಷ್ಮೇಶ್ವರ, ರೋಣ, ಗಜೇಂದ್ರಗಡ, ಮುಂಡರಗಿಯಲ್ಲಿ ಕೊನೆಯ ಹಂತದವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಪಾಟೀಲ್ ಅವರು, ಹೊಳೆಆಲೂರ, ಶಿರಹಟ್ಟಿಯಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ್ದಾರೆ.

ಜಿಲ್ಲೆಯ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಮತ ಎಣಿಕೆ ಕಾರ್ಯ ನಡೆಯಿತು.

ವಿವೇಕಾನಂದ ಪಾಟೀಲ ಅವರು ಗೆಲುವು ಸಾಧಿಸುತ್ತಿದ್ದಂತೆಯೇ ಬೆಂಬಲಿಗರು ಸಂಭ್ರಮ ಪಟ್ಟರು.