ವಿಜಯಸಾಕ್ಷಿ ಸುದ್ದಿ, ಗದಗ
ಒಂದೆಡೆ ಕೊರೊನಾ ಲಾಕ್ ಡೌನ್. ಇನ್ನೊಂದೆಡೆ ತುತ್ತು ಅನ್ನಕ್ಕೂ ಪರದಾಟ. ಇವುಗಳ ಮಧ್ಯೆ ಜನರು ಸದ್ಯ ಬದುಕು ನಡೆಸುತ್ತಿದ್ದಾರೆ. ಈ ಸಮಸ್ಯೆಗಳ ಮಧ್ಯೆ ಇರುವ ಅಜ್ಜಿಯೊಬ್ಬರು ವೃದ್ಧಾಪ್ಯ ವೇತನಕ್ಕಾಗಿ 2 ಕಿ.ಮೀ ದೂರ ನಡೆದುಕೊಂಡು ಬಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಲಾಕ್ ಡೌನ್ ನಿಂದಾಗಿ ಅಜ್ಜಿ ಆರ್ಥಿಕವಾಗಿ ಜರ್ಜರಿತವಾಗಿದ್ದರು. ಸದ್ಯ ಯಾವುದೇ ವಾಹನಗಳ ವ್ಯವಸ್ಥೆ ಇಲ್ಲ. ಹೀಗಾಗಿ ಅಜ್ಜಿಯೊಬ್ಬರು ಪೋಸ್ಟ್ ಆಫೀಸಿಗೆ ಎರಡು ಕಿ.ಮೀ ನಡೆದುಕೊಂಡೇ ಬಂದಿದ್ದಾರೆ.
ನಗರದ ಹಳೇ ಡಿಸಿ ಆಫೀಸ್ ಸರ್ಕಲ್ ಬಳಿ ಪೊಲೀಸರು ಅಜ್ಜಿಯನ್ನು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಅಜ್ಜಿಯ ನೋವು ಕೇಳಿದ ಪೊಲೀಸರು ಇಂದು ಪೋಸ್ಟ್ ಆಫೀಸ್ ಬಂದ್ ಇದೆ. ಸದ್ಯ ಅವು ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದಾಗ ಅಜ್ಜಿ ಮರಳಿ ಹೋಗಿದ್ದಾರೆ.
ಸದ್ಯ ಜಿಲ್ಲೆಯಲ್ಲಿ 5 ದಿನಗಳ ಕಠಿಣ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ವಾಹನ ಸೌಕರ್ಯವಿಲ್ಲ. ಕೈಯಲ್ಲಿ ಹಣ ಇಲ್ಲದ ಕಾರಣ, ಇಲ್ಲಿಯ ಭಜಂತ್ರಿ ನಗರದಿಂದ ಅಜ್ಜಿ ಯಲ್ಲವ್ವ ಭಜಂತ್ರಿ ನಡೆದುಕೊಂಡು ಬಂದಿದ್ದರು. ಕಿವಿ ಕೇಳದ ಕಾರಣಕ್ಕೆ ಅಜ್ಜಿ ಪರದಾಟ ನಡೆಸಿದ್ದರು. ಕೊನೆಗೆ ಅಜ್ಜಿಗೆ ಪೊಲೀಸರು ತಿಳಿ ಹೇಳಿ ಮರಳಿ ಕಳುಹಿಸಿದ್ದಾರೆ.