ವಿಜಯಸಾಕ್ಷಿ ಸುದ್ದಿ, ಗದಗ
‘ವರ’ದಕ್ಷಿಣೆ ಎಂಬ ಪದ ಕಿವಿಗೆ ಕೇಳಿಸಿದರೆ ಸಾಕು ಒಂದು ಕ್ಷಣ ಹೆಣ್ಣು ಹೆತ್ತವರ ಹೃದಯ ಬಡಿತ ಜೋರಾಗಿ ಹೊಡೆದುಕೊಳ್ಳುತ್ತದೆ. ಹೀಗಾಗಿ ಸರ್ಕಾರ ವರದಕ್ಷಿಣೆ ಕಿರುಕುಳ ನೀಡದಂತೆ ಅನೇಕ ಕಾನೂನು ಜಾರಿ ಮಾಡಿದರೂ, ಜನರಲ್ಲಿ ಜಾಗೃತಿ ಮೂಡಿಸಿದರೂ ಇಂತಹ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಲಿವೆ. ಅಂತಹದ್ದೇ ಒಂದು ಘಟನೆ ಗದಗ ನಗರದಲ್ಲಿ ಬೆಳಕಿಗೆ ಬಂದಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಅವರು ನಗರದ ಕಳಸಾಪುರ ರಸ್ತೆಯ ಸೇವಾಲಾಲ್ ನಗರದ ನಿವಾಸಿ ಕಿರಣ ಸೋಮಪ್ಪ ರಾಥೋಡ ಅವರನ್ನು ಏಳು ವರ್ಷಗಳ ಹಿಂದೆಯೇ ವಿವಾಹವಾಗಿದ್ದಾರೆ. ವೈದ್ಯೆ ತವರು ಮನೆಯಿಂದ ಹೊಸದಾಗಿ ಗಂಡನ ಮನೆಗೆ ಬಂದಾಗ ಮೂರ್ನಾಲ್ಕು ತಿಂಗಳು ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಬಳಿಕ ಮದುವೆ ಸಮಯದಲ್ಲಿ ವರದಕ್ಷಿಣೆ ಕೊಟ್ಟಿಲ್ಲ. ಹೀಗಾಗಿ ತವರು ಮನೆಯಿಂದ ೨೦ ಲಕ್ಷ ರೂ. ವರದಕ್ಷಿಣೆ ಹಣ ತರುವಂತೆ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ.
ಅಲ್ಲದೇ, ಗೋವಾದಲ್ಲಿದ್ದ ಮಾವ ಸೋಮಪ್ಪ ರಾಥೋಡ, ಅತ್ತೆ ಮತ್ತು ನಾದಿನಿ ಗೀತಾ ಅವರು ಫೋನ್ ಮಾಡಿ ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಪೀಡಿಸಿ ವಿಜಯಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿದ್ದಾರೆ. ಇನ್ನು ಗಂಡ ಕೂಡ ಹಲ್ಲೆ ನಡೆಸಿದ್ದಾರೆ ಅಂತೆ.
ಇದರಿಂದ ಬೇಸತ್ತ ವೈದ್ಯೆ ಅತ್ತೆ, ಮಾವ ಸಹಿತ ಗಂಡನ ಮನೆಯವರೆಲ್ಲರೂ ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಗದಗನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗದಗನ ಕಳಸಾಪುರ ರಸ್ತೆಯ ಸೇವಾಲಾಲ್ ನಗರದ ನಿವಾಸಿಗಳಾದ ಗಂಡ ಕಿರಣ ಸೋಮಪ್ಪ ರಾಥೋಡ, ರೇಣುಕಾ ರಾಥೋಡ, ಸೋಮಪ್ಪ ರಾಥೋಡ, ಅನಿತಾ ರಾಥೋಡ ಹಾಗೂ ಗೀತಾ ರಾಥೋಡ ಎಂಬ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.