ವಿಜಯಸಾಕ್ಷಿ ಸುದ್ದಿ, ಮಂಡ್ಯ
ಸಂಸದೆ ಸುಮಲತಾ ಮತ್ತು ಜೆಡಿಎಸ್ ಶಾಸಕ ಶ್ರೀಕಂಠಯ್ಯ ಮಧ್ಯೆ ತೀವ್ರ ಆರೋಪ -ಪ್ರತ್ಯಾರೋಪ ಮುಂದುವರಿದಿದೆ.
ಸಂಸದೆಯ ಸುತ್ತಮುತ್ತ ಗೂಂಡಾಗಳಿದ್ದಾರೆ. ಅಧಿಕಾರಿಗಳಿಗೆ ಕಿರುಕುಳ ಕೊಡುತ್ತಿದ್ದಾರೆ. ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಶಾಸಕ ರವೀಂದ್ರ ವಾಗ್ದಾಳಿ ನಡೆಸಿದ್ದರೆ,
ಇದಕ್ಕೆ ತಿರುಗೇಟು ನೀಡಿರುವ ಸಂಸದೆ ಸಮಲತಾ ಅಂಬರೀಶ್, ಅಕ್ರಮ ಗಣಿಗಾರಿಕೆ ನಿಲ್ಲಿಸುತ್ತಿದ್ದಂತೆ ಶ್ರೀಕಂಠಯ್ಯ ಅವರಿಗೆ ತೊಂದರೆಯಾಗುತ್ತಿದೆ.
ಅವರು ಮೆಂಟಲ್ ಆಗಿದ್ದಾರೆ. ಇದಕ್ಕೆ ಅವರು ಚಿಕಿತ್ಸೆ ಪಡೆಯಲಿ ಎಂದು ಸಲಹೆ ನೀಡಿದ್ದಾರೆ.
ಸುಮಲತಾ ಅವರ ಲೆಟರ್ ಹೆಡ್ ಗಳು ದುರುಪಯೋಗ ಆಗುತ್ತಿವೆ. ಅವರ ಆಪ್ತ ಕಾರ್ಯದರ್ಶಿ ಒಬ್ಬ ವಂಚಕ.
ಹಣಕ್ಕಾಗಿ ಅಧಿಕಾರಿಗಳಿಗೆ ಪೀಡಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳಿಗೆ ದಬಾಯಿಸಿ ಮಾತನಾಡಿ ಮಾನಸಿಕ ಒತ್ತಡ ತರುತ್ತಿದ್ದಾರೆ. ಅಧಿಕಾರಿಗಳು ಅವರ ಕಷ್ಟಗಳನ್ನು ನನ್ನ ಬಳಿ ತೋಡಿಕೊಂಡಿದ್ದಾರೆ.
ಎಫ್ ಸಿಸಿ ಜಿಲ್ಲಾಡಳಿತ ಸಂಪೂರ್ಣ ಕುಸಿದಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ದೌರ್ಜನ್ಯ ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಸಂಸದರೆಲ್ಲರೂ ಇದನ್ನು ನೋಡಿಯೂ ಸುಮ್ಮನಿದ್ದಾರೆ ಎಂದು ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿದ ಸುಮಲತಾ, ಅವರು ಏನು ಹೇಳುತ್ತಿದ್ದಾರೋ ಅಂತಹ ಸಂಸ್ಕೃತಿ ಅವರದ್ದು. ತಾವು ಯಾವ ರೀತಿ ಬೆಳೆದುಕೊಂಡು ಬಂದಿದ್ದಾರೋ ಅದನ್ನು ಹೇಳುತ್ತಿದ್ದಾರೆ.
ಸಮಸ್ಯೆ ಇದ್ದರೆ ದೂರು ಕೊಡಲಿ, ಅವರ ಸಮಸ್ಯೆ ಅದೊಂದೇ, ಅಕ್ರಮ ಗಣಿಗಾರಿಕೆ ನಿಲ್ಲಿಸುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ. ಕ್ಷೇತ್ರದ ಪ್ರತಿ ಮನೆಯಲ್ಲಿ ಇವರ ಅನ್ಯಾಯ ಹೇಳುತ್ತಾರೆ. ಇಂತವರ ಆರೋಪಗಳಿಗೆಲ್ಲ ಹೆದರುವವಳು ನಾನಲ್ಲ ಎಂದು ಸುಮಲತಾ ಹೇಳಿದ್ದಾರೆ.