ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಾದ್ಯಂತ ಇಂದಿನಿಂದ ಐದು ದಿನಗಳ ಕಾಲ ಕಠಿಣ ಹಾಗೂ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ. ಹೀಗಾಗಿ ಬೆಳಿಗ್ಗೆ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ, ಜನ ಮಾತ್ರ ಎಷ್ಟೇ ಹೇಳಿದರೂ ಮೈ ಮರೆಯುವುದನ್ನು ಮಾತ್ರ ಬಿಡಲಿಲ್ಲ.
ಕೊರೊನಾ ಎಗ್ಗಿಲ್ಲದೆ ಜನರ ಪ್ರಾಣ ಕಿತ್ತುಕೊಂಡು ಹೋಗುತ್ತಿದ್ದರೂ ಕೂಡ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮುಗಿ ಬಿದ್ದಿದ್ದರು. ನಗರದ ನಾಮ ಜೋಶಿ ರೋಡ್ ನಲ್ಲಿ ಜನ ಜಂಗುಳಿಯೇ ತುಂಬಿತ್ತು. ಇಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿರುವ ಜನರು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಮರೆತು ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ.
ಗದಗ- ಬೆಟಗೇರಿ ಅವಳಿ ನಗರದ ಜನರು ಸೇರಿದಂತೆ ಗ್ರಾಮೀಣ ಭಾಗದ ಜನರು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಹೀಗಾಗಿ ಮಾರುಕಟ್ಟೆಗಳು ಜನ ಜಾತ್ರೆಯಂತಾಗಿತ್ತು. ಬಹುತೇಕರು ಮಾಸ್ಕ್ ಗಳನ್ನೇ ಹಾಕಿಕೊಂಡು ಬಂದಿರಲಿಲ್ಲ. ಸಾಮಾಜಿಕ ಅಂತರವಂತೂ ಇವರಿಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದಾರೆ.

ಸರ್ಕಾರ ಹಾಗೂ ಜಿಲ್ಲಾಡಳಿತ ಹಲವು ಕಾರ್ಯಕ್ರಮಗಳ ಮೂಲಕ ಹಾಗೂ ಲಾಕ್ ಡೌನ್ ಮೂಲಕ ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿದರೂ ಜನರು ಮಾತ್ರ ಸುಧಾರಿಸುತ್ತಿಲ್ಲ. ಅಧಿಕಾರಿಗಳು ಎಷ್ಟೇ ಬುದ್ಧಿ ಹೇಳಿದರೂ ಜನ ಮಾತ್ರ ತಮ್ಮ ವರ್ತನೆಯಿಂದಲೇ ಎಲ್ಲವನ್ನೂ ಖರೀದಿಸಿ ಮನೆಗಳತ್ತ ಮುಖ ಮಾಡಿದರು.
ಇಂದಿನಿಂದ ಮತ್ತೆ ಜಿಲ್ಲೆಯಲ್ಲಿ ಜೂ. 7ರ ವರೆಗೆ ಸಂಪೂರ್ಣ ಲಾಕ್ ಡೌನ್ ಇರಲಿದೆ.