ಸರ್ಕಾರಿ ಕಟ್ಟಡಕ್ಕೆ ಜನಪ್ರತಿನಿಧಿ ಹೆಸರು: ಗ್ರಾಮಸ್ಥರ ವಿರೋಧ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ

Advertisement

ಸಮೀಪದ ನೀಲಗುಂದ ಗ್ರಾಮದಲ್ಲಿ ನಿರ್ಮಿತಿ ಕೇಂದ್ರ ನೂತನಾವಾಗಿ ನಿರ್ಮಿಸಿರುವ ಸಾಂಸ್ಕೃತಿಕ ಭವನಕ್ಕೆ ರಾತ್ರೋರಾತ್ರಿ
ಜನಪ್ರತಿನಿಧಿಯೊಬ್ಬರ ಹೆಸರು ನಾಮಕರಣ ಮಾಡಿದ್ದಕ್ಕಾಗಿ ಗ್ರಾಮಸ್ಥರು ಸೇರಿದಂತೆ ಬಿಜೆಪಿ ಗದಗ ಗ್ರಾಮೀಣ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರವಿ ವಗ್ಗನವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಮೊದಲು ಬರೀ ಸಾಂಸ್ಕೃತಿಕ ಭವನ ಎಂದು ಹೆಸರಿಡಲಾಗಿತ್ತು. ಆದರೆ ರಾತ್ರೋರಾತ್ರಿ ಬದಲಾಗಿ ಗದಗ ತಾಲ್ಲೂಕು ಪಂಚಾಯತ ಅಧ್ಯಕ್ಷರಾಗಿದ್ದ ದಿ.ರವಿಕುಮಾರ ಇನಾಮತಿ ಅವರ ಹೆಸರಿಟ್ಟಿದ್ದಾರೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದು, ಅಧಿಕಾರಿಗಳು ಕಾಂಗ್ರೆಸ್ ಶಾಸಕರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಮಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ರವಿ ದೂರಿದ್ದಾರೆ.

ಗ್ರಾಮ ಪಂಚಾಯತಿ ಠರಾವು ಇಲ್ಲದೇ , ಗ್ರಾಮಸ್ಥರ ಅಭಿಪ್ರಾಯಗಳನ್ನೂ ಸಂಗ್ರಹಿಸದೆ ಸಾಂಸ್ಕೃತಿಕ ಭವನಕ್ಕೆ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಯೊಬ್ಬರ ಹೆಸರಿಟ್ಟಿರುವುದು ಖಂಡನೀಯ ಎಂದಿರುವ ಅವರು, ಗ್ರಾಮಕ್ಕೆ ಅವರ ಕೊಡುಗೆ ಏನು? ನಾಮಕರಣ ಮಾಡುವ ಮೊದಲು ಗ್ರಾಮಸ್ಥರ ಸಭೆ ಕರೆದು ಕೇಳಿದರೆ ಒಪ್ಪಿಕೊಳ್ಳುತ್ತಿದ್ದೆವೇನೋ? ಆದರೆ, ಇದ್ಯಾವುದು ಮಾಡದೆ ತರಾತುರಿಯಲ್ಲಿ ಸಾಂಸ್ಕೃತಿಕ ಕಟ್ಟಡಕ್ಕೆ ಹೆಸರಿಟ್ಟಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಸಾಂಸ್ಕೃತಿಕ ಕಟ್ಟಡಕ್ಕೆ ಶರಣರ ಹೆಸರಿಡಿ

2017-18 ಸಾಲಿನ ವಿಶೇಷ ಘಟಕ ಯೋಜನೆಯಡಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಾಂಸ್ಕೃತಿಕ ಭವನಕ್ಕೆ ಗ್ರಾಮದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರ ಹೆಸರಿಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ಕೇಳಲು ತಾಲ್ಲೂಕು ಪಂಚಾಯತ ಇಒ ಜಿನಗಾ ಅವರಿಗೆ ಕರೆ ಮಾಡಿದರೆ, ಅವರ ಫೋನ್ ನಂಬರ್ ವ್ಯಾಪ್ತಿಯ ಪ್ರದೇಶದ ಹೊರಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯತ ಸಿಇಒ ಡಾ. ಕೆ ಆನಂದ,
‘ನನಗೂ ಈ ವಿಷಯದ ಬಗ್ಗೆ ಗೊತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸುತ್ತೇನೆ’ ಎಂದರು.

‘ಕಟ್ಟಡದ ಉದ್ಘಾಟನೆ ಇವತ್ತೈತ್ರಿ, ಅದಕ್ಕ ನಾವು ಅಲ್ಲಿಗೆ ಹೊರಟೀವಿ. ಆದರೆ, ಕಟ್ಟಡಕ್ಕೆ ಜನಪ್ರತಿನಿಧಿಯೊಬ್ಬರ ಹೆಸರು ಇಟ್ಟಿರುವುದು ನಮಗೆ ಗೊತ್ತಿಲ್ಲ ರೀ, ನಮ್ಮ ಗಮನಕ್ಕೂ ತಂದಿಲ್ಲ ರೀ, ತಾಲ್ಲೂಕು ಪಂಚಾಯತ ಇಒ ಅವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇನೆ’.

ಶಿವಾನಂದ ತೊಂಡಿಹಾಳ, ಪಿಡಿಒ, ಗ್ರಾಮ ಪಂಚಾಯತಿ ಚಿಂಚಲಿ

Spread the love

LEAVE A REPLY

Please enter your comment!
Please enter your name here