-ನರೇಗಾ ಯೋಜನೆಯ ಕರ್ಮಕಾಂಡ
-15 ಸಾವಿರ ಲಂಚ ಕೊಡದಿದ್ದಕ್ಕೆ ಪಿಡಿಓ ಕಿರುಕುಳ
–ತಿಳಿ ಹೇಳಿದರೂ ಧಮ್ಕಿ ಹಾಕಿ ಸ್ವೀಕೃತಿ ಪತ್ರ ಪಡೆದರು: ಪಿಡಿಓ
ವಿಜಯಸಾಕ್ಷಿ ವಿಶೇಷ ಸುದ್ದಿ, ಕೊಪ್ಪಳ: ಏನಾದರೂ ಸಾರ್ವಜನಿಕ ಸಮಸ್ಯೆಗಳಿದ್ದರೆ ದೂರು ನೀಡುವುದು, ಕೊಟ್ಟಿರುವ ದೂರಿಗೆ ಸ್ವೀಕೃತಿ ಪತ್ರ ಪಡೆಯುವುದು ಸಾಮಾನ್ಯ. ನೌಕರಿ, ಆಸ್ತಿ ಮತ್ತಿತರ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಖಾಸಗಿಯಾಗಿಯೂ ಸ್ವೀಕೃತಿ ಪತ್ರ ಪಡೆಯುವುದು ಗೊತ್ತಿರುವ ಸಂಗತಿ. ಆದರೆ ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯತಿಯೊಂದು ನನ್ನ ಸಾವಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳೇ ಕಾರಣ ಎಂದು ಕೊಟ್ಟಿರುವ ಪತ್ರಕ್ಕೆ ಸ್ವೀಕೃತಿ ನೀಡಿ, ದೂರ ಇದರ ನನ್ನು ಪರೋಕ್ಷವಾಗಿ ‘ಸತ್ತು ಹೋಗು” ಎಂದು ಹೇಳಿದಂತಿದೆ.
ವಿಷಯ ಇಷ್ಟೇ:
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿ ನರೇಗಾ ಯೋಜನೆಯಡಿ 2022ರ ಜನವರಿ 1ರಿಂದ 8ರವರೆಗೆ ನರೇಗಾ ಯೋಜನೆಯಡಿ ಮಂಗಳೂರಿನ ಮಂಜುನಾಥ ಕಂಬಾರ ಅವರ ಹೊಲದಲ್ಲಿ ಕೃಷಿಹೊಂಡ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಗೆ ಸುಮಾರು 65 ಸಾವಿರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಗ್ರಾಮ ಪಂಚಾಯತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ್.ಜಿ ಅವರು,ಅನುದಾನ ಬಿಡುಗಡೆಗೊಳಿಸಲು 15 ಸಾವಿರ ಲಂಚ ಕೇಳಿದರೆಂದು ಫಲಾನುಭವಿ ಮಂಜುನಾಥ ಕಂಬಾರ ಆರೋಪಿಸಿದರು.
ಈ ವಿಷಯ ಕುರಿತು ಮಂಗಳವಾರ ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸರಕಾರದ ನಿಯಮಾವಳಿ ಪ್ರಕಾರ ಕಾಮಗಾರಿ ನಡೆದಿದೆ. ಅವರು ಅನುದಾನ ನೀಡುವ ಭರವಸೆ ಕೊಟ್ಟ ನಂತರವೇ ಹಣ ಖರ್ಚು ಮಾಡಿ ಕೃಷಿ ಹೊಂಡ ನಿರ್ಮಿಸಲಾಗಿದೆ. ಕೇಳಿದ ಲಂಚ ಕೊಡದಿರುವುದಕ್ಕೆ ಪಿಡಿಒ ಸತಾಯಿಸುತ್ತಿದ್ದಾರೆ ಎಂದು ಮಂಜುನಾಥ ದೂರಿದರು.
ಸಾಕಷ್ಟು ಬಾರಿ ವಿನಂತಿಸಿದರೂ ಪಿಡಿಓ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಸಾಕಷ್ಟು ಕಿರುಕುಳ ನೀಡಿದ್ದಾರೆ. ಇದರಿಂದ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ, ನನ್ನ ಸಾವಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳೇ ಕಾರಣ ಎಂದು ಬರೆದ ಪತ್ರವನ್ನು ಗ್ರಾಪಂಗೆ ನೀಡಿದ್ದು, ಅದಕ್ಕೂ ಗ್ರಾಪಂ ಸ್ವೀಕೃತಿ ನೀಡಿರುವುದನ್ನು ಗಮನಿಸಿದರೆ ಪರೋಕ್ಷವಾಗಿ “ಸತ್ತು ಹೋಗು” ಎನ್ನುವಂತಿದೆ ಗ್ರಾಮ ಪಂಚಾಯತಿ ನಿಲುವು ಎಂದು ಅವರು ಅಲವತ್ತುಕೊಂಡರು.
ಈ ವೇಳೆ ಮಂಗಳೂರಿನ ಹನುಮಂತಪ್ಪ ಕಂಬಾರ, ಮಾರುತಿ ಕಂಬಾರ, ಮಲ್ಲನಗೌಡ ಕೋಣನಗೌಡರ ಹಾಗೂ ಮುದುಕಪ್ಪ ಪೂಜಾರಿ ಇದ್ದರು.
ಲಂಚ ಕೇಳಿರುವ ಆರೋಪ ಶುದ್ಧ ಸುಳ್ಳು. ಇದಕ್ಕೆ ಒಂದೇ ಒಂದು ಸಾಕ್ಷ್ಯ ಒದಗಿಸಿದರೂ ಕೆಲಸ ಬಿಟ್ಟು ಬಿಡುವೆ. ಹಿಂದಿನಂತೆ ಪಂಚಾಯಿತಿಯಲ್ಲಿ “ಹೊಂದಿಕೊಂಡು” ಹೋಗಲು ಅವರೇ ಆಮಿಷ ಒಡ್ಡಿದರೂ, ಸರಕಾರಿ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅದು ಅವರಿಗೆ ನುಂಗಲಾರದ ತುತ್ತಾಗಿ ಈ ರೀತಿ ಷಡ್ಯಂತ್ರ ರೂಪಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಪತ್ರ ಪಂಚಾಯಿತಿಗೆ ಕೊಡಲು ಬಂದಾಗ ಕಚೇರಿಯ ಸಿಬ್ಬಂದಿ ತಿಳಿ ಹೇಳಿದರೂ ಕೇಳದೇ ನಮ್ಮ ಸಿಬ್ಬಂದಿಗೆ ಧಮ್ಕಿ ಹಾಕಿ ಸ್ವೀಕೃತಿ ಪತ್ರ ಪಡೆದಿದ್ದಾರೆ. ಈ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಕಾನೂನು ಚೌಕಟ್ಟಿನಲ್ಲಿ ನನ್ನ ಕೆಲಸ ನಾನು ಮಾಡುತ್ತೇನೆ. ಸಾಯುವುದಾಗಿ ಹೇಳುವವರನ್ನು ಎಂದಿಗೂ ಪ್ರಚೋದಿಸುವುದಿಲ್ಲ.
-ವೀರೇಶ್.ಜಿ., ಪಿಡಿಓ, ಮಂಗಳೂರು ಗ್ರಾಪಂ, ಕುಕನೂರು ತಾಲೂಕು, ಕೊಪ್ಪಳ ಜಿಲ್ಲೆ.