ವಿಜಯಸಾಕ್ಷಿ ಸುದ್ದಿ, ಗದಗ
ಬುಧವಾರ ರಾತ್ರಿ ಸುರಿದ ಗುಡುಗು ಸಿಡಿಲು ಸಹಿತ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಬುಧವಾರ ತಡರಾತ್ರಿ ಸಿಡಿಲು ಬಡಿದು 16 ಕುರಿಗಳು ಸಾವನ್ನಪಿದ ಘಟನೆ ನಡೆದಿದೆ. ಗದಗ ತಾಲೂಕಿನ ಲಿಂಗಧಾಳ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ.
ಕುರಿಗಾಯಿ ಹನುಮಂತಪ್ಪ ಬ್ಯಾಡಗಿ ಎಂಬುವವರಿಗೆ ಸೇರಿದ ಕುರಿಗಳಾಗಿದ್ದು ಸುಮಾರು 1 ಲಕ್ಷ ರೂ. ವರೆಗೆ ನಷ್ಟವಾಗಿದೆ ಅಂತ ಕುಟುಂಬಸ್ಥರು ಅಳಲುತೋಡಿಕೊಂಡಿದ್ದಾರೆ.

ಲಿಂಗಧಾಳ ಗ್ರಾಮದ ನಿವಾಸಿಯಾಗಿರುವ ಹನುಮಂತಪ್ಪ ಅವರು ಪ್ರತಿ ದಿನ ಊರ ಹೊರಗಡೆ ಇರುವ ಕುರಿದೊಡ್ಡಿಯಲ್ಲಿ ನಿಲ್ಲಿಸುತ್ತಿದ್ದರು.
ಜೋರಾಗಿ ಮಳೆ ಬರ್ತಿದ್ದರಿಂದ ಕುರಿದೊಡ್ಡಿಯಿಂದ ಪಕ್ಕದಲ್ಲಿ ಇದ್ದ ಬನ್ನಿಮರದ ಕೆಳೆಗೆ ಅವಿತು ಕುಳಿತಿದ್ದವು. ಈ ವೇಳೆ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರದ ಕೆಳಗಿದ್ದ ಕುರಿ ಮತ್ತು ಮರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಆದ್ರೆ ಕುರಿಗಾಯಿ ಹನುಮಂತಪ್ಪ ರಾತ್ರಿ ಮನೆಗೆ ಬಂದಿದ್ದ. ಬೆಳಿಗ್ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಸರ್ಕಾರ ಪರಿಹಾರ ನೀಡುವಂತೆ ಕುರಿಗಾಯಿ ಹನುಮಂತಪ್ಪ ಮನವಿ ಮಾಡಿಕೊಂಡಿದ್ದಾನೆ. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.