ವಿಜಯಸಾಕ್ಷಿ ಸುದ್ದಿ, ಗೋಕಾಕ
ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ 140 ಅಡಿ ಆಳದ ಕಂದಕಕ್ಕೆ ಬಿದ್ದ ಯುವಕ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್ ನಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಮೂಲದ ಪ್ರದೀಪ ಸಾಗರ ಅದೃಷ್ಟವಂತ ಯುವಕ. ಬೆಳಗಾವಿಯ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿರುವ ಪ್ರದೀಪ ಶನಿವಾರ ರಜೆ ಮಜಾ ಜಳೆಯಲು ಸ್ನೇಹಿತರ ಜತೆ ಗೋಕಾಕ್ ಫಾಲ್ಸ್ ಗೆ ಬಂದಿದ್ದ.
ಫಾಲ್ಸ್ ಮೇಲಿನ ಬಂಡೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸುವ ವೇಳೆ 140 ಅಡಿ ಆಳದ ಕಂದಕಕ್ಕೆ ಜಾರಿಬಿದ್ದಿದ್ದಾನೆ. ಸ್ನೇಹಿತರು ತಕ್ಷಣ ಗೋಕಾಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಗೋಕಾಕ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಾತ್ರಿಯವರೆಗೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಬದುಕುಳಿದಿರುವುದು ಅಸಾಧ್ಯವಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ಮೊಟಕುಗೊಳಿಸಿ ಸಿಬ್ಬಂದಿ ಹಾಗೂ ಸ್ನೇಹಿತರು ತೆರಳಿದ್ದರು.
ಆದರೆ ಬೆಳಗಿನ ಜಾವ 4 ಗಂಟೆಗೆ ಪ್ರದೀಪ ಸ್ನೇಹಿತರಿಗೆ ಕರೆ ಮಾಡಿ, ತನ್ನ ಲೋಕೇಶನ್ ಶೇರ್ ಮಾಡಿದ್ದ. ಸ್ನೇಹಿತರು ತಕ್ಷಣ ಗೋಕಾಕದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
140 ಅಡಿ ಆಳದ ಕಂದಕಕ್ಕೆ ಇಳಿದ ಆಯೂಬ್ ಖಾನ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪ್ರದೀಪನನ್ನು ರಕ್ಷಿಸಿ ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿದ್ದ ಸ್ಥಿತಿ ನೋಡಿದರೆ ಯುವಕ ಬದುಕುಳಿದಿರುವುದು ಪವಾಡವೆಂದೇ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.