ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮಹಾಮಾರಿಯಿಂದ ನಿಧನ ಹೊಂದಿದ ರೋಗಿಯ ಮೃತದೇಹವನ್ನೇ ಒತ್ತೆಯಾಗಿಟ್ಟುಕೊಂಡು ರೂ. 1.30 ಲಕ್ಷ ಚಿಕಿತ್ಸಾ ಶುಲ್ಕ ಪಾವತಿಸುವಂತೆ ಇಲ್ಲಿಯ ಖಾಸಗಿ ಆಸ್ಪತ್ರೆ ಪಟ್ಟು ಹಿಡಿದಿದ್ದು, ಹಣ ಪಾವತಿಸಲು ಆಗದೆ ಕುಟುಂಬಸ್ಥರು ಒದ್ದಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮೇ. 19 ರಂದು ನಾಗವಾರದ ಕುಪ್ಪುಸ್ವಾಮಿ ಲೇಔಟ್ ನಿವಾಸಿಯಾಗಿದ್ದ 70 ವರ್ಷದ ಮಖ್ಬೂಲ್ ಜಾನ್ ಎಂಬ ವೃದ್ಧೆಗೆ ಸೋಂಕು ಅಂಟಿಕೊಂಡಿತ್ತು. ಹೀಗಾಗಿ ಅವರನ್ನು ಇಲ್ಲಿಯ ಭಗವಾನ್ ಮಹವೀರ್ ಜೈನ್ ಆಸ್ಪತ್ರೆಗೆ ಸರ್ಕಾರ ನೀಡಿರುವ ಮೀಸಲಾತಿ ಅಡಿಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆದರೆ, ವೃದ್ದೆಗೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹೀಗಾಗಿ ಅವರು ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಬಿಲ್ ಪಾವತಿ ಮಾಡದಿದ್ದರೂ ಮೃತದೇಹಗಳನ್ನು ಆಸ್ಪತ್ರೆ ಇಟ್ಟುಕೊಳ್ಳಬಾರದು ಎಂದು ಸರ್ಕಾರ ತಿಳಿಸಿದ್ದರೂ ಆಸ್ಪತ್ರೆ ಮಾತ್ರ ಈ ಮೃತ ದೇಹ ಒತ್ತಾಯಾಗಿ ಇಟ್ಟುಕೊಂಡು ಬಿಲ್ ಪಾವತಿಸುವಂತೆ ಒತ್ತಾಯ ಮಾಡಿದೆ.
ಈ ವೃದ್ಧೆಗೆ ಚಿಕಿತ್ಸೆ ನೀಡಿದ್ದಕ್ಕೆ ಆಸ್ಪತ್ರೆ ಒಟ್ಟು ರೂ.3,67,753 ಬಿಲ್ ಮಾಡಿದೆ. ಇನ್ನಿತರ ಪರೀಕ್ಷೆ ಹಾಗೂ ರೋಗಿಗೆ ನೀಡಲಾಗಿರುವ ಕೆಲವು ಔಷಧಿಗಳು ಆಯುಷ್ಮಾನ್ ಭಾರತ್-ರಾಜ್ಯ ಆರೋಗ್ಯ ಯೋಜನೆಗಳ ಅಡಿಯಲ್ಲಿ ಬಾರದ ಹಿನ್ನೆಲೆಯಲ್ಲಿ ಇವುಗಳ ಬಿಲ್ ಮೊತ್ತವನ್ನು ರೂ. 1,30,253 ಮಾಡಿದೆ. ಮೃತ ವೃದ್ಧೆಯ ಪುತ್ರ ವಿಕಲಚೇತನರಾಗಿದ್ದು, ನಿರುದ್ಯೋಗಿಯಾಗಿದ್ದಾರೆ. ಬಡ ಕುಟುಂಬವಾಗಿದ್ದು, ಬಿಲ್ ಪಾವತಿಸಲಾಗದೆ ಸಂಕಷ್ಟಕ್ಕೆ ಈಡಾಗಿದ್ದರು. ಆ ನಂತರ ತುರ್ತು ಪ್ರತಿಕ್ರಿಯಾ ತಂಡ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಧ್ಯೆ ಪ್ರವೇಶಿಸಿದ್ದಾರೆ. ಬರೋಬ್ಬರಿ 5 ಗಂಟೆಗಳ ನಂತರ ಆಸ್ಪತ್ರೆಯವರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.