ವಿಜಯಸಾಕ್ಷಿ ಸುದ್ದಿ, ಪಾಲಕ್ಕಾಡ್
ಪ್ರೀತಿಗೆ ಪೋಷಕರ ವಿರೋಧ ವ್ಯಕ್ತವಾಗಿದ್ದರಿಂದಾಗಿ ಪ್ರೇಮಿಯನ್ನೇ 10 ವರ್ಷಗಳ ಕಾಲ ಬಚ್ಚಿಟ್ಟ ಘಟನೆ ಬೆಳಕಿಗೆ ಬಂದಿದೆ. 34 ವರ್ಷದ ವ್ಯಕ್ತಿಯೊಬ್ಬ ಮನೆಯ ಪಕ್ಕದ ಯುವತಿ 28 ವರ್ಷದ ಸಜಿತಾಳನ್ನು ಪ್ರೀತಿಸುತ್ತಿದ್ದ. ಇದಕ್ಕೆ ಪೋಷಕರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸಜಿತಾ ಮನೆ ಬಿಟ್ಟು ಬಂದಿದ್ದಳು. ಆದರೆ, ಉಳಿದವರಂತೆ ಬೇರೆ ಓಡಿ ಹೋಗದೆ ಈ ವ್ಯಕ್ತಿ, ತನ್ನ ಕೋಣೆಯಲ್ಲಿಯೇ ಅಡಗಿಸಿಟ್ಟಿದ್ದಾನೆ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 10 ವರ್ಷಗಳ ಕಾಲ ಅಡಗಿಸಿಟ್ಟಿದ್ದಾನೆ.
ಸಜಿತಾ ನಿತ್ಯ ಕರ್ಮಗಳಿಗಾಗಿ ರಾತ್ರಿಯ ಸಂದರ್ಭದಲ್ಲಿ ಮಾತ್ರ ಹೊರ ಬರುತ್ತಿದ್ದಳು. ಮೂರು ತಿಂಗಳ ಹಿಂದೆ ರಹಮಾನ್ ತನ್ನ ಮನೆಯಿಂದ ನಾಪತ್ತೆಯಾಗಿದ್ದ. ಆನಂತರ ಅವರ ಸಹೋದರರು ಆತನನ್ನು ವಿಚಾರಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಈ ವಿಷಯ ಬೆಳಕಿಗೆ ಬರುವವರೆಗೂ ಮನೆಯಲ್ಲಿಯೇ ಇದ್ದ ಸಜಿತಾಳನ್ನು ಮಗನ ಪಾಲಕರು ಸಹ ಕಂಡು ಹಿಡಿದಿರಲಿಲ್ಲ.
ಪೊಲೀಸರು ಮಧ್ಯಪ್ರವೇಶಿಸಿದ ನಂತರ ರಹಮಾನ್ ನಡೆದ ಘಟನೆ ತಿಳಿಸಿದ್ದಾನೆ.
ಪೊಲೀಸರು ರಹಮಾನ್ ಮತ್ತು ಸಜಿತಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸಜಿತಾ ಅವನೊಂದಿಗೆ ವಾಸಿಸಲು ಬಯಸಿದ್ದರಿಂದ ಅವನ ಜೊತೆ ಹೋಗಲು ಕೋರ್ಟ್ ಅನುಮತಿ ನೀಡಿದೆ.
ಆಯಿಲೂರ್ ನ ಕರತ್ ಪರಂಬು ಮೊಹಮ್ಮದ್ ಘಾನಿ ಅವರ ಮಗ ರಹಮಾನ್ ಮತ್ತು ನೆರೆಹೊರೆಯಲ್ಲಿ ವಾಸಿಸುತ್ತಿದ್ದ ವೇಲಾಯುಧನ್ ಅವರ ಪುತ್ರಿ ಸಜಿತಾ ಪ್ರೀತಿಸುತ್ತಿದ್ದರು ಎಂದು ನೆಮರಾ ಪೊಲೀಸರು ತಿಳಿಸಿದ್ದಾರೆ.
ಕುಟುಂಬಸ್ಥರ ವಿರೋಧಕ್ಕೆ ಹೆದರಿದ್ದ ಸಜಿತಾ 2010ರ ಫೆ. 2ರಂದು ತನ್ನ ಮನೆ ಬಿಟ್ಟು ಬಂದಿದ್ದಳು. ರಹಮಾನ್ ಕೋಣೆಯೊಳಗೆ ತೆರಳಿ ಆಹಾರ ನೀಡುತ್ತಿದ್ದ. ಪೋಷಕರನ್ನು ಹೊರತುಪಡಿಸಿ ರಹಮಾನ್ ಸಹೋದರಿ ಸಹ ಮನೆಯಲ್ಲಿ ವಾಸಿಸುತ್ತಿದ್ದರು. ಆದರೂ ಯಾರೊಬ್ಬರಿಗೆ ವಿಷಯ ತಿಳಿಯದಂತೆ ಜಾಗೃತಿ ವಹಿಸಿದ್ದ. ಸಜಿತಾ ಪೋಷಕರು 10 ವರ್ಷಗಳ ಹಿಂದೆ ಮಗಳು ಕಾಣೆಯಾಗಿದ್ದಾಳೆ ದೂರು ನೀಡಿದ್ದರು. ಈ ದೂರಿನನ್ವಯ ಆಗ ರಹಮಾನ್ ಸೇರಿದಂತೆ ಅನೇಕರನ್ನು ಪೊಲೀಸರು ಪ್ರಶ್ನಿಸಿದ್ದರು.
2021ರ ಮಾ. 3ರಂದು ರಹಮಾನ್ ಕಾಣೆಯಾಗಿರುವುದಾಗಿ ಪೋಷಕರು ನೆನ್ಮಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರಹಮಾನ್ ನೆನ್ಮರಾ ಪಟ್ಟಣದಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿರುವುದನ್ನು ಸಹೋದರ ನೋಡಿದ್ದ. ಇದರಿಂದ ಆತಂಕಗೊಂಡ ರಹಮಾನ್ ಸಮೀಪದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿ ಸಹಾಯ ಕೋರಿದ್ದ. ಈ ಸಂದರ್ಭದಲ್ಲಿ ತಾನು ಮತ್ತು ಸಜಿತಾ ಮೂರು ತಿಂಗಳಿನಿಂದ ವಿಥುನಾಶೇರಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾನೆ.
ಚಿತ್ರಕಲೆ ಮತ್ತು ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ರಹಮಾನ್, ಸಾಂದರ್ಭಿಕವಾಗಿ ಮಾತ್ರ ಕೆಲಸಕ್ಕೆ ಹೋಗುತ್ತಿದ್ದ. ಆದರೆ, ರಹಮಾನ್ ಪೋಷಕರು ಪ್ರತಿದಿನ ಕೆಲಸಕ್ಕೆ ಹೋಗುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದರು. ಸಜಿತಾ ಪೋಷಕರನ್ನು ಪ್ರಶ್ನಿಸಿದಾಗ ಅವರು ಮಗಳು ಮೃತಪಟ್ಟಿದ್ದಾಗಿ ಭಾವಿಸಿದ್ದರು ಎಂದು ಹೇಳಿದ್ದಾರೆ.