ವಿಜಯಸಾಕ್ಷಿ ಸುದ್ದಿ, ರೋಣ : ಆಗಸ್ಟ್ 23ರಿಂದ 25ರವರೆಗೆ ಜಿಲ್ಲಾ ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೋಟೆನಾಡು ಗಜೇಂದ್ರಗಡದಲ್ಲಿ ನಡೆಯಲಿದ್ದು, ಕನ್ನಡದ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶುಕ್ರವಾರ ಸಂಜೆ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ನಾಡು-ನುಡಿಗೆ ರೋಣ ಸೇರಿದಂತೆ ಗಜೇಂದ್ರಗಡ ತಾಲೂಕುಗಳು ವಿಶೇಷ ಕೊಡುಗೆಗಳನ್ನು ನೀಡಿವೆ. ಈ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂತೆ ಜರುಗಬೇಕು. ಇದಕ್ಕಾಗಿ ನಾನು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದು, ಅಧಿಕಾರಿಗಳೂ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಆ.23ರಂದು ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿಯವರ ಮನೆಯಿಂದ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ಹೊರಡಲಿದೆ.
ದೊಡ್ಡಮೇಟಿಯವರ ಕುರಿತು ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಉಪನ್ಯಾಸವನ್ನು ಹಮ್ಮಿಕೊಂಡಿದ್ದು, ನಂತರ ಮೆರವಣಿಗೆ ನರೆಗಲ್ಲ ಪಟ್ಟಣದ ಮೂಲಕ ನಿಡಗುಂದಿ ತಲುಪಿ ಸಂಜೆ ಗಜೇಂದ್ರಗಡ ಪಟ್ಟಣಕ್ಕೆ ಆಗಮಿಸಲಿದೆ ಎಂದರು.
ಆ.24ರಂದು ಬೆಳಿಗ್ಗೆ 9ಕ್ಕೆ ಶಾಸಕ ಜಿ.ಎಸ್. ಪಾಟೀಲರು ಕನ್ನಡದ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ನಂತರ ವೇದಿಕೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರುಗಳು ಉದ್ಘಾಟಿಸಲಿದ್ದಾರೆ. ನಂತರ ಕನ್ನಡ ನಾಡಿನ ಹಿರಿಮೆ ಕುರಿತು ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರೊ. ಚಂದ್ರಶೇಖರ್ ವಸ್ತçದರನ್ನು ಆಯ್ಕೆ ಮಾಡಲಾಗಿದ್ದು, ಸಾರೋಟ ಹಾಗೂ ಕುಂಭಮೇಳದ ಮೆರವಣಿಗೆ ಮೂಲಕ ಅವರನ್ನು ಕರೆತರಲಾಗುವುದು ಎಂದ ಅವರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಎರಡೂ ತಾಲೂಕುಗಳ ತಹಸೀಲ್ದಾರರು, ಅಧಿಕಾರಿಗಳು ಉಪಸ್ಥಿತರಿದ್ದರು.
ದೇಶಕ್ಕಾಗಿ, ಕನ್ನಡ ನಾಡು-ನುಡಿಯ ಹಿತಕ್ಕಾಗಿ ಅಂದಾನಪ್ಪ ದೊಡ್ಡಮೇಟಿಯವರ ಕೊಡುಗೆ ಅಪಾರವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸುವುದು ಅಗತ್ಯವಾಗಿದೆ. ಅಲ್ಲದೆ ಜಿಲ್ಲೆಯ ಬೆಳ್ಳಿ ಹಬ್ಬ, ನಾಡಿನ 50ರ ಸಂಭ್ರಮ ಸೇರಿದಂತೆ ಜಕ್ಕಲಿ ಗ್ರಾಮದ ಇತಿಹಾಸವನ್ನು ಮೆಲಕು ಹಾಕುವ ಕಾರ್ಯ ಆ.23ರಂದು ಸಂಭ್ರಮದಿಂದ ನಡೆಯಬೇಕು.
– ಜಿ.ಎಸ್. ಪಾಟೀಲ.
ಶಾಸಕರು, ರೋಣ.