ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಮನದಲ್ಲಿನ ಕಲುಷಿತ ಅಂಧಕಾರವನ್ನು ದೂರವಾಗಿಸಿ ಬದುಕನ್ನು ಸನ್ಮಾರ್ಗಾದತ್ತ ಸಾಗಿಸಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವಶ್ಯಕ ಎಂದು ಡಾ.ಅಬ್ದುಲ್ ಕಲಾಂ ಟ್ರಸ್ಟ್ನ ಅಧ್ಯಕ್ಷ ರಫೀಕ್ ತೋರಗಲ್ ಹೇಳಿದರು.
ಪಟ್ಟಣದ ನವನಗರ ಬಡಾವಣೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಮಂಗಳವಾರ ನಡೆದ ನಾಗರಕಟ್ಟಿಯ 11ನೇ ವರ್ಷದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಯಮುಕ್ತ ಬದುಕಿಗೆ ದಾನ, ಧರ್ಮ ಎಂಬುದು ರಹದಾರಿಯಾಗಿದ್ದು, ಒಳ್ಳೆಯ ಆಚಾರ, ವಿಚಾರಗಳು ಮನುಷ್ಯನ ಬದುಕಿನಲ್ಲಿ ನೆಮ್ಮದಿಯ ಸೆಲೆಯಾಗಿವೆ. ಹೀಗಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನ್ಯಾಯ, ನೀತಿ, ಧರ್ಮ ಹಾಗೂ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ವಿವರಣೆ ಜತೆಗೆ ಸಹಬಾಳ್ವೆಯ ಬದುಕು ನಡೆಸುವ ವಿಚಾರ ಧಾರೆಗಳು ತಿಳಿಯುತ್ತವೆ. ಒತ್ತಡ ಬದುಕಿನಿಂದ ಆಧ್ಯಾತ್ಮದ ಬದುಕಿನತ್ತ ವಾಲಲು ಧಾರ್ಮಿಕ ಕಾರ್ಯಕ್ರಮಗಳು ಸಹಾಯಕವಾಗಿವೆ. ಈ ದಿಸೆಯಲ್ಲಿ ಬಡಾವಣೆಯಸ ನಿವಾಸಿಗಳು ನಾಗರಕಟ್ಟಿಯ ಅನ್ನಪ್ರಸಾದ ಕಾರ್ಯಕ್ರಮದಲ್ಲಿ ಭಾಗವಹಿತ್ತಿರುವುದು ಅನುಕರಣೀಯ ಎಂದರು.
ಮುಖಂಡರಾದ ಪ್ರಭುಲಿಂಗಗೌಡ ಶಿನ್ನೂರ, ಕಳಕಪ್ಪ ಪೋತಾ ಮಾತನಾಡಿ, ಪಟ್ಟಣದ ನವನಗರ ಬಡಾವಣೆಯಲ್ಲಿ ಕಳೆದ 10 ವರ್ಷಗಳಿಂದ ಶ್ರಾವಣ ಮಾಸದಲ್ಲಿ ನಡೆಯುತ್ತಿರುವ ಅನ್ನಸಂತರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಡಾವಣೆಯ ಎಲ್ಲ ಸಮುದಾಯದವರು ಭಾಗವಹಿಸುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವ ಮೂಲಕ ಎಲ್ಲರೂ ಒಂದು ಎಂಬ ಸಂದೇಶ ಗಟ್ಟಿಯಾಗುವುದರ ಜತೆಗೆ ಸಹಬಾಳ್ವೆ ನಡೆಸಲು ಸಹಕಾರಿ ಎಂದರು.
ಮುಖಂಡರಾದ ಮಲ್ಲೇಶ ಜೂಚನಿ, ಶಂಕರಗೌಡ ಶಿನ್ನೂರ, ಶರಣಪ್ಪ ಚಳಗೇರಿ, ಬಬ್ಲು ಮನಿಯಾರ, ಬಸವರಾಜ ಶಿನ್ನೂರ, ಎಫ್.ಎಸ್. ಕರಿದುರಗನವರ, ಮಹ್ಮದಗೌಸ್ ಅಕ್ಕಿ, ಅಬ್ದುಲ ಗಣಿ, ಚೇಕಪ್ಪ ಚೋಳಿನ, ಅಂಬಾಸ ರಂಗ್ರೇಜ ಮುಂತಾದವರಿದ್ದರು.