ವಿಜಯಸಾಕ್ಷಿ ಸುದ್ದಿ, ಮುಳಗುಂದ : ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಗುರುವಾರ ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ 18.74 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.
ಒಟ್ಟು ಜಮಾ 977.89 ಲಕ್ಷ, ಒಟ್ಟು ಖರ್ಚು 959.15 ಲಕ್ಷ ಸೇರಿ 18.74 ಲಕ್ಷ ರೂ ಉಳಿತಾಯದ ಬಜೆಟ್ ಮಂಡಿಸಿದ್ದು, ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಪಟ್ಟಣದಲ್ಲಿನ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಲಾಗಿದೆ.
ಬಜೆಟ್ ಮಂಡಿಸಿದ ನಂತರ ಕೆಲ ಸಾರ್ವಜನಿಕರು ಪಟ್ಟಣದಲ್ಲಿನ ಉದ್ಯಾನವನ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಹಾಗೂ ಕೆಲ ವಾರ್ಡ್ಗಳಲ್ಲಿ ನೀರಿ ಸಮಸ್ಯೆ ಇದೆ. ಕುಡಿಯಲು ಬೋರ್ವೆಲ್ ನೀರು ಸರಬರಾಜು ಮಾಡಲಾಗುತ್ತಿದೆ. ಇದರಲ್ಲಿ ಅಧಿಕವಾಗಿ ಪ್ಲೋರೈಡ್ ಇದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ತುಂಗಭದ್ರಾ ನದಿ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಲು ಪ.ಪಂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ.ಜಾ, ಪ.ಪಂ ಕಲ್ಯಾಣ ನಿಧಿ ಶೇ.29, ಬಡಜನರ ಕಲ್ಯಾಣ ನಿಧಿ ಶೇ.7.25 ಹಾಗೂ ಅಂಗವಿಕಲರ ಕಲ್ಯಾಣ ನಿಧಿ ಶೇ.5 ಸೇರಿ ಒಟ್ಟು 18 ಲಕ್ಷ ಪ್ರಸಕ್ತ ಸಾಲಿನ ಅಂದಾಜು ಆಯ-ವ್ಯಯದಲ್ಲಿ ಮೀಸಲಿಡಲಾಗಿದೆ. ಬಂಡವಾಳ ಪಾವತಿಗಳು ಕಟ್ಟಡಗಳು 50.50 ಲಕ್ಷ, ನಾಗರಿಕ ವಿನ್ಯಾಸಗಳು ಹಾಗೂ ಸ್ಮಶಾನ ಅಭಿವೃದ್ಧಿ 15.75 ಲಕ್ಷ, ರಸ್ತೆ-ಪಾದಚಾರಿ ಮಾರ್ಗಗಳು 55.25 ಲಕ್ಷ, ಚರಂಡಿ ಹಾಗೂ ರಸ್ತೆಬದಿ ಚರಂಡಿಗಳು 45.50 ಲಕ್ಷ, ಇತರೆ ಸ್ಥಿರಾಸ್ತಿಗಳು 5 ಲಕ್ಷ, ಬೀದಿ ದೀಪಗಳು 25 ಲಕ್ಷ, ಲಘು ವಾಹನಗಳು 5 ಲಕ್ಷ, ಕಚೇರಿ ಉಪಕರಣಗಳು 8 ಲಕ್ಷ, ಜೋಡಣೆಗಳು ಮತ್ತು ಸಲಕರಣೆಗಳು 5 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ 41 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ವಾಹನಗಳು 30 ಲಕ್ಷ ಹಾಗೂ ಭೂಮಿ ಉದ್ಯಾನವನಗಳು ಮತ್ತು ತೋಟಗಳು 15.50 ಲಕ್ಷ ಸೇರಿ ಒಟ್ಟು 336.50 ಲಕ್ಷ ಅಂದಾಜು ವೆಚ್ಚ ಹಾಗೂ ಪಾವತಿಗಳನ್ನು ನಿರೀಕ್ಷಿಸಲಾಗಿದೆ ಎಂದು ಪ.ಪಂ ಮುಖ್ಯಾಧಿಕಾರಿಗಳು ಖರ್ಚು ವೆಚ್ಚದ ಲೆಕ್ಕ ನೀಡಿದರು.
ಪ.ಪಂ ಸರ್ವ ಸದಸ್ಯರು ಹಾಗೂ ಪಟ್ಟಣದ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
ಸಾರ್ವಜನಿಕರ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಪ.ಪಂ ಮುಖ್ಯಾಧಿಕಾರಿಗಳು ತುಂಗಭದ್ರಾ ನದಿ ನೀರು ಪೂರೈಕೆ ಸ್ಥಗಿತವಾದ ಬಳಿಕ ನಿರ್ವಹಣೆ ಇಲ್ಲದೆ ಯಂತ್ರಗಳು ಹಾಳಾಗಿದ್ದು, ಶಿರಹಟ್ಟಿ-ಬೆಳ್ಳಟ್ಟಿ ನಡುವೆ ರಸ್ತೆ ಕಾಮಗಾರಿ ವೇಳೆ ಪೈಪ್ಗಳು ಒಡದಿವೆ. ಅವೆಲ್ಲಾ ದುರಸ್ತಿ ಕೆಲಸಕ್ಕೆ ಅಮೃತ 2.0ಯೋಜನೆ ಅಡಿಯಲ್ಲಿ ಅಂದಾಜು 25 ಕೋಟಿ ಬಿಡುಗಡೆಯಾಗಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ದುರಸ್ತಿಗೊಳಿಸಿ ಶಿರಹಟ್ಟಿ ಹಾಗೂ ಮುಳಗುಂದ ಪಪಂಗೆ ಹಸ್ತಾಂತರಿಸುತ್ತದೆ ಎಂದು ವಿವರಿಸಿದರು.