–ಟಾಯ್ ಕ್ಲಸ್ಟರ್ಗೆ ಭೂಮಿಪೂಜೆ, ಅಂಜನಾದ್ರಿ ಅಭಿವೃದ್ಧಿಗೆ ಅನುದಾನ
–ಚಿರತೆ ಕಾಟಕ್ಕೆ ಬೇಸತ್ತ ಗಂಗಾವತಿ ಭಾಗದ ಜನ, ಕನಕಗಿರಿ ಕ್ಷೇತ್ರದಲ್ಲಿ ನಿಲ್ಲದ ರಾಜಕೀಯ ಫೈಟ್
–ಬಸವರಾಜ ಕರುಗಲ್
ವಿಜಯಸಾಕ್ಷಿ ವಿಶೇಷ, ಕೊಪ್ಪಳ: ಕೋವಿಡ್-19 ಭೀತಿಯಲ್ಲೇ 2020ಕ್ಕೆ ಮುಗಿದು ಹೋಯ್ತು. 2021ರ ಆರಂಭವಾಗುತ್ತಿದ್ದಂತೆ ಬಾಘಿಲು ಮುಚ್ಚಿದ್ದ ಶಾಲೆಗಳು ತೆರೆದವು. ಹಾಗಾಗಿ ಕೊರೋನಾತಂಕ ಮುಗಿಯಿತು ಎನ್ನುವಷ್ಟರಲ್ಲೇ ಹೊಸ ವರ್ಷದ ಕಾಲು ಭಾಗದ ಅಂತ್ಯದ ಹೊತ್ತಿಗೆ ಮತ್ತೇ ಕೊರೋನಾರ್ಭಟ ಶುರುವಾಗಿದೆ. ಈ ಕಾಲು ವರ್ಷದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಸಂಗತಿಗಳ ಸುತ್ತ ಒಂದು ಸುತ್ತು ಇಲ್ಲಿದೆ.

2021ರ ಜನವರಿ 1 ಆರಂಭವಾಗುತ್ತಿದ್ದಂತೆ ಹೊಸ ವರ್ಷದ ಸಂಭ್ರಮದ ಜೊತೆಗೆ ಶಾಲೆಗಳು ಪುನಾರಂಭಗೊಂಡವು. ಸುಮಾರು ತಿಂಗಳುಗಳ ನಂತರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹೂವಿನ ಹಾಸಿಗೆ ಹಾಸಿ, ಪುಷ್ಟಮಳೆ ಸುರಿದು ಶಿಕ್ಷಕರು ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು. ಜೊತೆಗೆ 2020ರ ಡಿಸೆಂಬರ್ನಲ್ಲಿ ನಡೆದಿದ್ದ ಗ್ರಾಪಂ ಚುನಾವಣೆಯ ಸಂಪೂರ್ಣ ಫಲಿತಾಂಶವೂ ಹೊರಬಿತ್ತು.

ಗಂಗಾವತಿ ತಾಲೂಕಿನ ಆನೆಗೊಂದಿ, ಅಂಜನಾದ್ರಿ, ದುರ್ಗಾದೇವಿ ಗುಡಿ ಸುತ್ತಮುತ್ತ ಚಿರತೆ ಕಾಟ ನಿಂತಿರಲಿಲ್ಲ. ಕಳೆದ ವರ್ಷಾಂತ್ಯಕ್ಕೆ ಪೂಜಾರಿಯನ್ನೇ ಕೊಂದಿದ್ದ ಚಿರತೆ, ಆಡು ಮೇಯಿಸಲು ತೆರಳಿದ್ದ ಯುವಕನನ್ನೂ ಸಹ ಕೊಂದಿತ್ತು. ಅರಣ್ಯ ಸಚಿವರ ಭೇಟಿಗೆ ಪಟ್ಟು ಹೆಚ್ಚಾಗಿದ್ದರಿಂದ ಸಚಿವ ಆನಂದ್ ಸಿಂಗ್ ಮೃತ ಯುವಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಪರಿಹಾರ ವಿತರಿಸಿದ್ದರು. ಚಿರತೆ ಸೆರೆಗೆ ಗಜಪಡೆಯ ಪ್ರಯೋಗ ಮಾಡಲಾಯಿತಾದರೂ ಫಲ ನೀಡಲಿಲ್ಲ.
ಗ್ರಾಪಂ ಚುನಾವಣೆಯಲ್ಲಿ ಗೆದ್ದವರನ್ನು ಸನ್ಮಾನಿಸಲು ಕಾಂಗ್ರೆಸ್-ಬಿಜೆಪಿ ಪೈಪೋಟಿ ನಡೆಸಿ ಗೆದ್ದವರನ್ನು ಸನ್ಮಾನಿಸಿ ಬಲ ಪ್ರದರ್ಶನ ಮಾಡಿದವು. ಈ ವೇಳೆ ಸಚಿವರ ದಂಡೇ ಕೊಪ್ಪಳದಲ್ಲಿತ್ತು. ಕಾಂಗ್ರೆಸ್ ಸಹ ಬಿಜೆಪಿ ವಿರುದ್ಧ ಜಿದ್ದಿಗೆ ಬಿದ್ದಂತೆ ಸನ್ಮಾನ ಸಮಾರಂಭ ನಡೆಸಿತು. ಕುಕನೂರಿನ ಸಂಶೋಧಕ ಗುಲಬರ್ಗಾ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜ ಸಬರದ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಡಾ.ಗದ್ದಗಿಮಠ ತಜ್ಞ ಪ್ರಶಸ್ತಿ ಲಭಿಸಿದ್ದು ಜಿಲ್ಲೆಗೆ ಹೆಮ್ಮೆಯ ವಿಷಯ.
ಧಾರವಾಡದ ಮೈಲಾರಲಿಂಗ ಸ್ವಾಮಿ ಅಂಜನಾದ್ರಿ ಬೆಟ್ಟಗಳ ಮೇಲೆ ಉರುಳು ಸೇವೆ ಮಾಡಿದ್ದು ವಿಶೇಷವಾಗಿತ್ತು. ಜೊತೆಗೆ ಅಂಜನಾದ್ರಿ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸುಮಾರು 50 ಕೋಟಿ ರೂಪಾಯಿ ಅನುದಾನ ಮಂಜೂರುಗೊಳಿಸಿದ್ದು, ಏಪ್ರಿಲ್ 16ಕ್ಕೆ ಭೂಮಿ ಪೂಜೆ ನೆರವೇರುತ್ತಿರುವುದು ಜಿಲ್ಲೆಯ ಮಟ್ಟಿಗೆ ಸಂತಸದ ಸಂಗತಿ.

ಹಾಗೆಯೇ ಕುಕನೂರು ತಾಲೂಕಿನ ಭಾನಾಪುರ ಬಳಿ ಟಾಯ್ ಕ್ಲಸ್ಟರ್ಗೆ ಜನವರಿ 9ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂಮಿ ಪೂಜೆ ನೆರವೇರಿಸಿದ್ದು 2022ರ ಜನೇವರಿ ವೇಳೆಗೆ ಟಾಯ್ ಕ್ಲಸ್ಟರ್ ಕಾರ್ಯಾರಂಭಗೊಳ್ಳುವ ಭರವಸೆ ನೀಡಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದ ಜಯಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು ನಡೆಸುತ್ತಿದ್ದ ಪಾದಯಾತ್ರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕಿನ್ನಾಳ, ಕೊಪ್ಪಳ, ಗಿಣಗೇರಾ, ಹುಲಗಿ ಮಾರ್ಗವಾಗಿ ಸಂಚರಿಸಿ ಹೊಸಪೇಟೆ ತಲುಪಿತು.

ಜನವರಿ ಎರಡನೇ ವಾರದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ಜಿಲ್ಲೆಯ ಮೂವರು ಬಿಜೆಪಿ ಶಾಸಕರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಮತ್ತೇ ಹುಸಿಯಾಯಿತು. ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೆಸರು ಬಲವಾಗಿ ಕೇಳಿ ಬಂದಿತ್ತಾದರೂ ನಿರಾಸೆಯಾಯಿತು. ಶಾಸಕ ಆಚಾರ್ ಸಹ ಬೇಸರಗೊಂಡದ್ದು ಜನಸೇವಕ್ ಸಮಾವೇಶದಲ್ಲಿ ಕಂಡು ಬಂತು.
ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಜನವರಿ 30ರಂದು ಸರಳವಾಗಿ ನಡೆಯಿತು. ಈ ಸಲ ಬೆಳಗ್ಗೆ ರಥೋತ್ಸವ ನಡೆದದ್ದು ವಿಶೇಷವಾಗಿತ್ತು. ಈ ಸಲದ ಜಾತ್ರಾ ಮಹೋತ್ಸವದ ಶ್ರೀಗಳ ಸಂಕಲ್ಪದ ಅಂಗವಾಗಿ ಗಿಣಗೇರಾ ಕೆರೆ ಹೂಳೆತ್ತುವ ಕಾರ್ಯಕ್ಕೆ ಫೆ.21ರಂದು ಚಾಲನೆ ನೀಡಲಾಯಿತು. ಹಾಗೆಯೇ ಕುಕನೂರು ತಾಲೂಕಿನ ಕಟ್ಟಕಡೆಯ ಗ್ರಾಮ ಅಡವಿಹಳ್ಳಿಯನ್ನು ಗವಿಶ್ರೀಗಳು ದತ್ತು ಪಡೆದು ಅಭಿವೃದ್ಧಿಗೆ ಫೆ.27ರಂದು ಚಾಲನೆ ನೀಡಿದರು. 24*7 ಡಿಜಿಟಲ್ ಗ್ರಂಥಾಲಯವನ್ನು ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು.
ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಹಿಟ್ನಾಳ್ ಟೋಲ್ಗೇಟ್ ಬಳಿ ಪ್ರತಿಭಟನೆ ಹಾಗೆಯೇ ಕನಕಗಿರಿ ಕ್ಷೇತ್ರದಲ್ಲಿ ಬೆಲೆ ಏರಿಕೆ ಖಂಡಿಸಿ ನಡೆಸಿದ ಕಾಂಗ್ರೆಸ್ನ ಟ್ರ್ಯಾಕ್ಟರ್ ರ್ಯಾಲಿ, ಪ್ರತಿಯಾಗಿ ಬಿಜೆಪಿ ರ್ಯಾಲಿ, ವಿಜಯೇಂದ್ರ ಆಗಮನ.. ಹೀಗೆ ಕನಕಗಿರಿ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ ಇನ್ನೂ ಮುಂದುವರಿದಿದೆ.
ಆರ್ಥಿಕ ಸಂಕಷ್ಟದಿಂದ ಕಿಡ್ನಿ ಮಾರಾಟಕ್ಕಿಟ್ಟ ಗಂಗಾವತಿಯ ನಿರ್ವಾಹಕನ ಪ್ರಕರಣ ದೊಡ್ಡ ಸಂಚಲನ ಮೂಡಿಸಿತ್ತು. ಹಿಟ್ನಾಳ ಟೋಲ್ಗೇಟ್ನಲ್ಲಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಹ ಗೊಂದಲದ ಗೂಡಾಗಿತ್ತು. ಅಧಿಕಾರಿ ಮತ್ತವರ ಸ್ನೇಹಿತರೂ ಸಹ ಮೊದಲು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಪ್ರತಿಯಾಗಿ ಗ್ರಾಮಸ್ಥರು ಮನಬಂದಂತೆ ಅಧಿಕಾರಿಯನ್ನು ಥಳಿಸಿದ್ದರು. ಈ ಕುರಿತು ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
ಈ ನಡುವೆ ಫೆ.1ರ ಕೇಂದ್ರ ಬಜೆಟ್, ಮಾರ್ಚ್ 5ರ ರಾಜ್ಯಬಜೆಟ್ಗೆ ಜಿಲ್ಲೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಶಾರ್ಟ್ ಸರ್ಕ್ಯೂಟ್ನಿಂದಾಗಿ ಯುವಕನೊಬ್ಬ ಮಲಗಿದ ಸ್ಥಳದಲ್ಲೇ ಸಜೀವ ದಹನವಾಗಿದ್ದು, ಕುಷ್ಟಗಿ ತಾಲೂಕಿನ ಹಿರೇನಂದಿಹಾಳದ ಹಳ್ಳದಲ್ಲಿಮರಳು ಅಕ್ರಮದಿಂದಾಗಿ ಮಣ್ಣಿನ ಗುಡ್ಡ ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಆತಂಕ ತಂದೊಡ್ಡಿತ್ತು.
ಫೆ.14ರಂದು ಗಂಗಾವತಿ ರೈಲು ನಿಲ್ದಾಣದಿಂದ ಗೂಡ್ಸ್ ಸೇವೆ ಆರಂಭಕ್ಕೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು. ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮಹೇಶ್ ಜೋಶಿ, ರಾಜಶೇಖರ ಮುಲಾಲಿ, ಶೇಖರಗೌಡ ಮಾಲೀಪಾಟೀಲ ಪ್ರಚಾರ ನಡೆಸಿದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಫೆಬ್ರವರಿಯಲ್ಲಿ ಕುಷ್ಟಗಿ ತಾಲೂಕಿನ ಹಿರೇ ವಡ್ರಕಲ್ ಹಾಗೂ ಮಾರ್ಚ್ನಲ್ಲಿ ಕುಷ್ಟಗಿ ತಾಲೂಕಿನ ಬೀಳಗಿಯಲ್ಲಿ ಗ್ರಾಮವಾಸ್ತವ್ಯ ಹೂಡಿದ್ದರು. ಕೋವಿಶೀಲ್ಡ್ ಲಸಿಕೆ ಲಭ್ಯವಾಗಿದ್ದು ವರ್ಷದ ಕಾಲು ಭಾಗದೊಳಗೆ ಎಂಬುದು ವಿಶೇಷ. ಆದರೆ ಮಾರ್ಚ್ ಅಂತ್ಯದ ವೇಳೆಗೆ ಜಿಲ್ಲೆಯಲ್ಲೂ ಸಹ ಕೊರೋನಾರ್ಭಟ ಶುರುವಾಗಿದ್ದು ಜನರನ್ನು ಮತ್ತೇ ಆತಂಕದ ಕೂಪಕ್ಕೆ ತಳ್ಳಿದೆ.