ವಿಜಯಸಾಕ್ಷಿ ಸುದ್ದಿ, ಗದಗ : ನದಾಫ್/ಪಿಂಜಾರ ಸಮಾಜದ ಅರ್ಹ ಬಡಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಧನ ಸಹಾಯ, ಲ್ಯಾಪ್ಟಾಪ್ ವಿತರಣೆ, ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢಶಾಲಾ, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ 40 ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತ ಊಟ, ವಸತಿಯೊಂದಿಗೆ ಶಿಕ್ಷಣ ನೀಡುತ್ತಲಿದ್ದು, ಗದಗ ಜಿಲ್ಲಾ ಘಟಕವು ಈ ಕಾರ್ಯಕ್ಕೆ ಕೈ ಜೋಡಿಸಿದೆ. ಪ್ರಸ್ತುತ ಸಂಘದ 32ನೇ ಸಂಸ್ಥಾಪನಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು ನ. 16ರಂದು ನಗರದ ಆಂಗ್ಲೋ ಉರ್ದು ಸ್ಕೂಲ್, ಕಲಾ ಮತ್ತು ವಾಣಿಜ್ಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಮೈದಾನದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಕೆ.ಎಫ್. ಹುಲಕೋಟಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಮಾಜದ ಸಾಧಕರಿಗೆ `ದಿ. ಹಾಜಿ ಹೆಚ್. ಇಬ್ರಾಹಿಂಸಾಬ’ `ಜಗಳೂರ ಇಮಾಮಸಾಬ’ ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮರಾದ `ಪೈಲ್ವಾನ ಪಿಂಜಾರ ರಮಜಾನಸಾಬ’ ಹಾಗೂ `ಪ್ರಗತಿಪರ ರೈತ’ ಈ ಹೆಸರುಗಳ ರಾಜ್ಯಮಟ್ಟದ ಪ್ರಶಸ್ತಿಗಳನ್ನು, ಮಹಿಳೆಯರನ್ನು ಪ್ರೋತ್ಸಾಹಿಸಲು ದೇಶದ ಪ್ರಥಮ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ ಅವರ ಹೆಸರಿನಲ್ಲಿ ಸಮಾಜದ ಅತ್ಯುತ್ತಮ ಶಿಕ್ಷಕಿಯನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದರು.
ಜಿಲ್ಲಾ ಮಟ್ಟದ ಪ್ರಶಸ್ತಿಯಾಗಿ ಕಾಯಕಯೋಗಿ ಪ್ರಶಸ್ತಿ, ಭಾವೈಕ್ಯ ಪ್ರಶಸ್ತಿ ಹಾಗೂ ಎಸ್ಎಸ್ಎಲ್ಸಿಯಲ್ಲಿ ಶೇ.95, ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಿವೆ ಎಂದು ಮಾಹಿತಿ ನೀಡಿದರು.ರ್ಯಾಲಿಯ ಸಂದರ್ಭದಲ್ಲಿ ಹೆಜ್ಜೆ ಮೇಳ, ಜಾಂಜ್ ಮೇಳ, ಕರಡಿ ಮಜಲುಗಳ ಮೂಲಕ ಮೆರವಣಿಗೆಯು ಆಂಗ್ಲೋ ಉರ್ದು ಸ್ಕೂಲ್, ಕಲಾ ಮತ್ತು ವಾಣಿಜ್ಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಮೈದಾನದ ವೇದಿಕೆಯಲ್ಲಿ ಸಂಪೂರ್ಣಗೊಳ್ಳುವುದು. ಈ ಎಲ್ಲ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಭಾಗವಹಿಸಿ ಯಶಸ್ವಿಗೋಳಿಸಬೇಕು ಎಂದು ಕೆ.ಎಫ್. ಹುಲಕೋಟಿ (ರಬ್ಬಾನಿ) ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶೌಕತ್ ಅಲಿ ಅಣ್ಣಿಗೇರಿ, ಅಬ್ದುಲ್ ಶರೀಫ್ ನೂರಭಾಷಾ, ಖಾದರಸಾಬ್ ಹಳ್ಯಾಳ, ಎಂ.ಬಿ. ನದಾಫ್, ರಾಜೆಸಾಬ ಶಿಶುವಿನಹಳ್ಳಿ, ಆರ್.ವಾಯ್. ನದಾಫ್, ಎ.ಹೆಚ್. ಹೊಸಳ್ಳಿ, ಮಹಮ್ಮದ್ರಫಿ ಅಣ್ಣಿಗೇರಿ, ಮೈನುದ್ದಿನ್ ನಲವಡಿ, ರಾಜೆಸಾಬ ಅಣ್ಣಿಗೇರಿ, ಜಾಕೀರ ಬಾಗಲಕೋಟ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಚಿವ ಹೆಚ್.ಕೆ. ಪಾಟೀಲ, ಬಿ.ಝಡ್. ಜಮೀರ್ಅಹ್ಮದ್ಖಾನ್, ಶಿವರಾಜ್ ತಂಗಡಗಿ, ಸಂತೋಷ ಲಾಡ್, ಮುಖ್ಯ ಸಚೇತಕ ಸಲಿಂ ಅಹ್ಮದ, ಜಿ.ಎಸ್. ಪಾಟೀಲ, ಸಂಸದರು, ಶಾಸಕರು, ಎಲ್ಲ ಧರ್ಮದ ಧಾರ್ಮಿಕ ಗುರುಗಳು ಭಾಗವಹಿಸಲಿದ್ದಾರೆ. ನಮ್ಮ ಸಮಾಜಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳಿಗಾಗಿ ಗಟ್ಟಿ ಧ್ವನಿಯಲ್ಲಿ ಪ್ರಸ್ತಾಪಿಸುವ ಉದ್ದೇಶವನ್ನು ಹೊಂದಲಾಗಿದೆ ನ.16ರಂದು ಬೆಳಿಗ್ಗೆ 8 ಗಂಟೆಗೆ ಬೈಕ್ ರ್ಯಾಲಿ ಆಯೋಜಿಸಲಾಗಿದ್ದು, ಬೈಕ್ ರ್ಯಾಲಿಯು ಜಾಮಿಯಾ ಮಸೀದಿಯಿಂದ ಪ್ರಾರಂಭಗೊಳ್ಳಲಿದೆ ಎಂದು ಕೆ.ಎಫ್. ಹುಲಕೋಟಿ ತಿಳಿಸಿದರು.