ವಿಜಯಸಾಕ್ಷಿ ಸುದ್ದಿ, ಗದಗ: ಎಲ್.ವೈ. ದೇಸಾಯಿ ಸ್ಮಾರಕ ಸ್ಪರ್ಶ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಗದಗ ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ ಫೆ.15 ಮತ್ತು 16ರಂದು ತ್ರೀಡಿ ಕೀ ಹೋಲ್ ಆಪರೇಷನ್ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಡಾ. ಪ್ರಭಾ ದೇಸಾಯಿ ತಿಳಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯುವ ಕಾರ್ಯಾಗಾರದಲ್ಲಿ ಯುವ ವೈದ್ಯರು, ತಜ್ಞ ವೈದ್ಯರು ಭಾಗವಹಿಸಲಿದ್ದಾರೆ. ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಬಳಸುವ ತ್ರೀಡಿ ಕೀ ಹೋಲ್ ಶಸ್ತ್ರಚಿಕಿತ್ಸೆ ಕುರಿತಾಗಿ ತಜ್ಞರು ಯುವ ವೈದ್ಯರಿಗೆ ಹೆಚ್ಚಿನ ಜ್ಞಾನ ಒದಗಿಸಲಿದ್ದಾರೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಮೊದಲಬಾರಿಗೆ ಈ ರೀತಿಯ ಕಾರ್ಯಾಗಾರ ನಡೆಯುತ್ತಿದೆ. ಇದು ಗದಗ ವೈದ್ಯಕೀಯ ಕ್ಷೇತ್ರದಲ್ಲಿ ಮೈಲುಗಲ್ಲು ಸೃಷ್ಟಿಸಲಿದೆ. ಮೊದಲ ಬಾರಿಗೆ ಗರ್ಭಕೋಶ ಕಸಿ ಮಾಡಿದ ಖ್ಯಾತಿಯ ಡಾ. ಶೈಲೇಶ್ ಪುಂತಾಂಬೇಕರ್ ಸೇರಿದಂತೆ ಡಾ. ಬಿ.ರಮೇಶ್, ಮುಂಬೈನ ಡಾ. ವಿವೇಕ್ ಸಾಲುಂಕೆ, ಡಾ. ನಿತಿನ್ ಶಾ, ಡಾ. ಸುಧಾ ಟಂಡನ್, ಡಾ. ಗುರುಪ್ರಸಾದ್, ಡಾ. ಧನೇಶ್ ದೇಸಾಯಿ ಉಪನ್ಯಾಸ ನೀಡಲಿದ್ದಾರೆ. ವೈದ್ಯಕೀಯ ಜಗತ್ತಿನಲ್ಲಿ ಕ್ಲಿಷ್ಟಕರ ಎನಿಸುವ ಶಸ್ತ್ರಚಿಕಿತ್ಸೆಗಳನ್ನು ತಜ್ಞರು ಮಾಡಿ ತೊರಿಸಲಿದ್ದಾರೆ ಎಂದರು.
ನಗರದ ಕಾರ್ಕ್ ಇನ್ ಹೋಟೆಲ್ನಲ್ಲಿ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ಶಸ್ತçಚಿಕಿತ್ಸೆಗಳು ಸ್ಪರ್ಶ್ ಆಸ್ಪತ್ರೆಯಲ್ಲಿ ನಡೆಯಲಿವೆ. ಫೆ.15ರಂದು ಸಂಜೆ 6.30ಕ್ಕೆ ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಶಶಿಧರ್ ರೇಶ್ಮೆ, ಡಾ. ಧನೇಶ್ ದೇಸಾಯಿ, ಡಾ. ಪ್ರವೀಣ್ ಸಜ್ಜನರ್ ಇದ್ದರು.