ವಿಜಯಸಾಕ್ಷಿ ಸುದ್ದಿ, ಗದಗ : ಪ್ರಲ್ಹಾದ ಕುಲಕರ್ಣಿ, ಮಹಾಂತೇಶ ಹಾನಗಲ್ಲ ಹಾಗೂ ಆಕಾಶ ಕಟ್ಟಿಮನಿಯವರ ಅತ್ಯುತ್ತಮ ಬ್ಯಾಟಿಂಗ್ ಹಾಗೂ ಸಂತೋಷ ನವಲಗುಂದ, ಓಂಕಾರ ಕೇಸ್ತಿ ಮತ್ತು ವಿಶಾಲ ಕಬಾಡಿಯವರ ಅತ್ಯುತ್ತಮ ಬೌಲಿಂಗ್ ನಿಂದಾಗಿ ನಗರದ ಜಾನೋಪಂತರ ಕ್ರಿಕೆಟ್ ಅಕಾಡೆಮಿ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಧಾರವಾಡ ವಲಯ) ಆಶ್ರಯದ ೨ನೇ ಡಿವಿಜನ್ ಲೀಗ್ ಟೂರ್ನಿಯಲ್ಲಿ ೪ನೇ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಜಾನೋಪಂತರ ಕ್ರಿಕೆಟ್ ಅಕಾಡೆಮಿಯ ಪ್ರಹ್ಲಾದ ಕುಲಕರ್ಣಿ (೫೪ ಎಸೆತಗಳಲ್ಲಿ ೭೮ ರನ್) ಮಹಾಂತೇಶ ಹಾನಗಲ್ಲ (೬೯ ರನ್), ಆಕಾಶ ಕಟ್ಟಿಮನಿ (೫೨ ರನ್) ಹಾಗೂ ಅಭಿಷೇಕ ನಾಯ್ಕ ಬಾರಿಸಿದ ೨೦ ರನ್ಗಳ ನೆರವಿನಿಂದಾಗಿ ನಿಗದಿತ ೫೦ ಓವರ್ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೨೮೩ ರನ್ ಗಳಿಸಿತು.
ಹುಬ್ಬಳ್ಳಿ ತಂಡದ ಪರ ಈರಪ್ಪ ಘಂಟಿ ಹಾಗೂ ಪ್ರವೀಣ ಕೋಟ್ಯಾಳ ತಲಾ ೨ ವಿಕೆಟ್ ಪಡೆದರು.
ನಂತರ ಬ್ಯಾಟಿಂಗ್ ಮಾಡಿದ ಟ್ಯಾಲೆಂಟ್ ಸ್ಪೋರ್ಟ್ಸ ಕ್ಲಬ್ನವರು ಗದಗ ತಂಡದ ಬೌಲರ್ಗಳಾದ ಸಂತೋಷ ನವಲಗುಂದ (೨೯ಕ್ಕೆ ೩ ವಿಕೆಟ್), ವಿಶಾಲ ಕಬಾಡಿ (೩೩ಕ್ಕೆ ೨ ವಿಕೆಟ್) ಹಾಗೂ ಓಂಕಾರ ಕೇಸ್ತಿಯ (೧೪ಕ್ಕೆ ೩ ವಿಕೆಟ್) ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ೩೧ನೇ ಓವರಿನಲ್ಲಿ ೧೦೮ ರನ್ ಗಳಿಸಿ ಆಲೌಟ್ ಆಯಿತು. ಈ ಜಯದಿಂದಾಗಿ ಗದಗ ತಂಡ ೪ ಅಂಕ ಸಂಪಾದಿಸಿತು.