ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ಉತ್ತರ ಪ್ರವೇಶ ದ್ವಾರದ ದುರಸ್ತಿಗೆ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ ನಗರದಿಂದ ಹಾವೇರಿಗೆ ತೆರಳುವ ಸಂದರ್ಭದಲ್ಲಿ ಭಾನುವಾರ ಇಲ್ಲಿನ ಸುಭಾಷ ಓದುನವರ ಜೀನಿನಲ್ಲಿ ಪುರಸಭೆಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿ ಅವರು ಮಾತನಾಡಿದರು.
ದೇವಸ್ಥಾನದ ಪ್ರವೇಶ ದ್ವಾರ ಶಿಥಿಲಗೊಂಡಿದ್ದರ ಬಗ್ಗೆ ಜಿ.ಎಸ್. ಗಡ್ಡದೇವರಮಠ, ಚೆನ್ನಪ್ಪ ಜಗಲಿ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗನೇ ಅದರ ದುರಸ್ತಿಗೆ ಹಣ ಬಿಡುಗಡೆ ಮಾಡುತ್ತೇನೆ ಎಂದ ಅವರು, ಲಕ್ಷ್ಮೇಶ್ವರದ ಅಭಿವೃದ್ಧಿ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಅನುದಾನ ಕೊಡಿಸುತ್ತೇನೆ ಎಂದರು.
ಪುರಸಭೆ ಅಧ್ಯಕ್ಷೆ ಯಲ್ಲವ್ವ ದರಗಣ್ಣವರ, ಉಪಾಧ್ಯಕ್ಷ ರ್ದೋಷ್ ಆಡೂರ ಅವರನ್ನು ಸಚಿವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ, ಗುರುನಾಥ ದಾನಪ್ಪನವರ, ಸತೀಶಗೌಡ ಪಾಟೀಲ, ವಿ.ಜಿ. ಪಡಿಗೇರಿ, ಜಯಕ್ಕ ಕಳ್ಳಿ, ಜಯಕ್ಕ ಅಂದಲಗಿ, ಮಂಜಕ್ಕ ನಂದೆಣ್ಣವರ, ಚೆನ್ನಪ್ಪ ಜಗಲಿ, ಯಲ್ಲಪ್ಪ ಸೂರಣಗಿ, ಜಗದೀಶ ಹುಲಿಗೆಮ್ಮನವರ, ಬಸವರಾಜ ಓದುನವರ, ರಾಜಣ್ಣ ಕುಂಬಿ, ಮಹೇಶ ಹೊಗೆಸೊಪ್ಪಿನ ಪಂಚ ಗ್ಯಾರಂಟಿ ತಾಲೂಕು ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ಫಕ್ಕೀರೇಶ ಮ್ಯಾಟಣ್ಣವರ, ಶಿವನಗೌಡ ಪಾಟೀಲ, ಬಾಬಣ್ಣ ಅಳವಂಡಿ, ಪದ್ಮರಾಜ ಪಾಟೀಲ, ರಾಜಣ್ಣ ಹೊಳಲಾಪುರ, ರಫೀಕ್ ಕಲಬುರಗಿ, ನೀಲಪ್ಪ ಶೆರಸೂರಿ, ರಾಮಣ್ಣ ಗಡದವರ, ಗಂಗಪ್ಪ ದುರಗಣ್ಣವರ, ಫಕ್ಕೀರೇಶ ನಂದೆಣ್ಣವರ, ತಿಪ್ಪಣ್ಣ ಸಂಶಿ, ಕಿರಣ ನವಲೆ, ಮುದಕಣ್ಣ ಗದ್ದಿ ಮತ್ತಿತರರು ಇದ್ದರು.
ತುಂಗಭದ್ರಾ ನದಿ ಕುಡಿಯುವ ನೀರಿನ ಪೈಪ್ಲೈನ್ ಹಳೆಯದಾಗಿದ್ದು, ನೀರು ಪೂರೈಕೆಯಲ್ಲಿ ತೊಂದರೆ ಆಗುತ್ತಿದೆ. ಈ ಬಗ್ಗೆ ಏನು ಕ್ರಮಕೈಗೊಳ್ಳತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸದ್ಯ ಇರುವ ಪೈಪ್ಲೈನ್ ಹಳೆಯದಾಗಿದೆ. ಹೊಸ ಪೈಪ್ಲೈನ್ ಅಳವಡಿಸುವ ಕುರಿತು ಕೆಡಿಪಿ ಸಭೆಯಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಹುಡುಕೋಣ. ಕೆಯುಡಬ್ಲ್ಯುಎಸ್ ಅಧಿಕಾರಿಗಳೊಂದಿಗೂ ಸಭೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.