ಮೈಸೂರು: ಒಣಗಿದ ದಾಸವಾಳ ಹೂವನ್ನು ನುಂಗಿದ ಪರಿಣಾಮ ಉಸಿರುಗಟ್ಟಿ ಆರು ತಿಂಗಳ ಮಗು ಸಾವನ್ನಪ್ಪಿದ ದಾರುಣ ಘಟನೆ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು ಚಿನ್ಮಯಿಗೌಡ (6 ತಿಂಗಳು) ಎಂದು ಗುರುತಿಸಲಾಗಿದೆ. ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರನಾಗಿದ್ದ ಮಗು ಮನೆಯಲ್ಲೇ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮನೆಯ ಹೊಸಲಿನಲ್ಲಿ ಪೂಜೆಗೆ ಇಡಲಾಗಿದ್ದ ದಾಸವಾಳ ಹೂವಿನ ತುಂಡನ್ನು ಮಗು ಬಾಯಿಗೆ ಹಾಕಿಕೊಂಡಿದೆ. ಈ ವೇಳೆ ಅಣ್ಣ ಕಿತ್ತುಕೊಳ್ಳಬಹುದು ಎಂಬ ಭಯದಿಂದ ಮಗು ಅದನ್ನು ನುಂಗಿದ್ದು, ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿದೆ.
ತಕ್ಷಣವೇ ಮಗುವನ್ನು ಹನಗೋಡು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.



