ವಿಜಯಸಾಕ್ಷಿ ಸುದ್ದಿ, ಧಾರವಾಡ : ಭಾರತ ಚುನಾವಣಾ ಆಯೋಗದಿಂದ ಧಾರವಾಡ ಲೋಕಸಭೆ ಮತಕ್ಷತ್ರಕ್ಕೆ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಮಾರ್ಚ್ 16ರಂದು, ಮಾದರಿ ನೀತಿ ಸಂಹಿತೆ ಜಾರಿಯಾದ 24 ಗಂಟೆಯ ಒಳಗಡೆ ಎಲ್ಲ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಖಾಸಗಿ ಒಡೆತನದಲ್ಲಿರುವ ಸ್ಥಳ, ಕಟ್ಟಡಗಳ ಮೇಲೆ ಪ್ರಕಟಿಸಲಾಗಿದ್ದ ವಿವಿಧ ರೀತಿಯ ಪ್ರಚಾರ ಹಾಗೂ ಮತದಾರರ ಮೇಲೆ ಪ್ರಭಾವ ಬೀರುವಂತಹ ಸುಮಾರು 6742 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆ ಜಾರಿಯಾದ ಮರುಕ್ಷಣದಿಂದಲೇ ಜಿಲ್ಲೆಯ ಎಲ್ಲ ನಗರ, ಪಟ್ಟಣ, ಮಹಾನಗರ ಹಾಗೂ ಗ್ರಾಮಗಳಲ್ಲಿ ಸರಕಾರಿ, ಸಾರ್ವಜನಿಕ ಮತ್ತು ಖಾಸಗಿ ಸ್ಥಳ, ಕಟ್ಟಡಗಳಲ್ಲಿ ಪ್ರಚುರಪಡಿಸಿದ್ದ, ಮತದಾರರ ಮೇಲೆ ಪ್ರಭಾವ ಬೀರಬಹುದಾದ ವಿವಿಧ ರೀತಿಯ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ತಂಡದ ಸದಸ್ಯರು ಜಿಲ್ಲೆಯ ಪ್ರತಿ ಸ್ಥಳಗಳನ್ನು ಪರಿಶೀಲಿಸುತ್ತಿದ್ದು, ಸ್ಥಳೀಯ ಹಾಗೂ ಗ್ರಾಮಮಟ್ಟದಲ್ಲಿ ಕೂಲಂಕುಷವಾಗಿ ಈ ಕುರಿತು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿಯಾದ 32 ಗಂಟೆಯೊಳಗೆ ಜಿಲ್ಲೆಯ ಖಾಸಗಿ ಮಾಲೀಕತ್ವದ ಸ್ಥಳಗಳಲ್ಲಿರುವ 1158 ಗೋಡೆ ಬರಹಗಳು, 658 ಪೋಸ್ಟರ್ಗಳು, 577 ಬ್ಯಾನರ್ಗಳು ಮತ್ತು 304 ಇತರೆ ಸೇರಿ ಒಟ್ಟು 2697 ಪ್ರಚಾರ ಸಾಮಗ್ರಿಗಳನ್ನು 206 ತಂಡಗಳಿಂದ ತೆರವುಗೊಳಿಸಲಾಗಿದೆ.
ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರಚಾರ ಸಾಮಗ್ರಗಳನ್ನು ಪ್ರಚುರ ಪಡಿಸುವ ಮೊದಲು ಭಾರತ ಚುನಾವಣಾ ಆಯೋಗದ ನಿಯಮಾನುಸಾರ ಜಿಲ್ಲಾ ಎಂಸಿಎಂಸಿ ಸಮಿತಿ ಅನುಮತಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ ನಿಯಮಾನುಸಾರ ತಕ್ಷಣ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾದರಿ ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ಜಿಲ್ಲೆಯ ಸರಕಾರಿ ಸ್ಥಳಗಳಲ್ಲಿ ಪ್ರಕಟಿಸಲಾಗಿದ್ದ 634 ಗೋಡೆ ಬರಹಗಳು, 623 ಪೊಸ್ಟರ್ಗಳು, 393 ಬ್ಯಾನರ್ಗಳು ಹಾಗೂ 451 ಇತರೆ ಸೇರಿ ಒಟ್ಟು 2101 ಪ್ರಚಾರ ಸಾಮಗ್ರಿಗಳನ್ನು 173 ತಂಡಗಳಿಂದ ತೆರವುಗೊಳಿಸಲಾಗಿದೆ.
ಮಾದರಿ ನೀತಿ ಸಂಹಿತೆ ಜಾರಿಯಾದ 48 ಗಂಟೆಯೊಳಗೆ ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿರುವ 362 ಗೋಡೆ ಬರಹಗಳು, 745 ಪೋಸ್ಟರ್ಗಳು, 391 ಬ್ಯಾನರ್ಗಳು ಹಾಗೂ 446 ಇತರೆ ಸೇರಿ ಒಟ್ಟು 1944 ಪ್ರಚಾರ ಸಾಮಗ್ರಿಗಳನ್ನು 191 ತಂಡಗಳಿಂದ ತೆರವುಗೊಳಿಸಲಾಗಿದೆ.