ಬೆಳಗಾವಿ:- ರಾಜ್ಯದ ಕಾರ್ಮಿಕರಿಗೆ 7 ಲಕ್ಷ ಟೂಲ್ ಕಿಟ್ ವಿತರಣೆ ಮಾಡಲಾಗಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ವತಿಯಿಂದ ವಿವಿಧ ವೃತ್ತಿ ಮಾಡುತ್ತಿರುವ ರಾಜ್ಯದ ಕಾರ್ಮಿಕರಿಗೆ 7 ಲಕ್ಷ ಟೂಲ್ ಕಿಟ್ ವಿತರಿಸಲಾಗಿದೆ. ಒಮ್ಮೆ ಕಾರ್ಮಿಕ ಕಿಟ್ ಪಡೆದರೆ ಮತ್ತೊಮ್ಮೆ ಅದೇ ಕಾರ್ಮಿಕರಿಗೆ ಕಿಟ್ ನೀಡಲು ಸದ್ಯ ಇರುವ ನಿಯಮಗಳಲ್ಲಿ ಅವಕಾಶವಿಲ್ಲ. ಈ ನಿಯಮಕ್ಕೆ ಮಾರ್ಪಾಡು ತಂದು 5 ವರ್ಷಗಳ ಕಾಲಮಿತಿಯನ್ನು ನಿಗದಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಟೂಲ್ ಕಿಟ್ ಪಡೆಯುವ ಫಲಾನುಭವಿಗಳಿಗೆ ಕಾಲಮಿತಿ ನಿಗದಿ ಮಾಡಲಾಗುವುದು. ಶೇ.13ರಷ್ಟು ಕಾರ್ಮಿಕ ಮಹಿಳೆಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಬಂದಿದೆ. ಆದ್ದರಿಂದ ಸರ್ಕಾರ ಪೌಷ್ಠಿಕ ಆಹಾರದ ಕಿಟ್ಗಳನ್ನು ನೀಡಲು ಸಿದ್ಧತೆ ನಡೆಸಿದೆ. ವ್ಯಾಸಂಗ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಈ ಹಿಂದೆ ಶಾಲಾಕಿಟ್ ನೀಡಲಾಗುತ್ತಿತ್ತು. ಇದರ ಬದಲಾಗಿ ವಿದ್ಯಾರ್ಥಿವೇತನ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದರು.



