ವಿಜಯಸಾಕ್ಷಿ ಸುದ್ದಿ, ಗದಗ : ಚಪ್ಪರಬಂದ್ ಸಮುದಾಯದ ಜನ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರೂ ಅವರನ್ನು ಅಪರಾಧಿ ಬುಡಕಟ್ಟು ಕಾಯಿದೆಯಿಂದ 1952ರ ಆಗಸ್ಟ್ 31ರಂದು ಮುಕ್ತಗೊಳಿಸಲಾಯಿತು. ಆ ಕಾರಣಕ್ಕಾಗಿ ಪ್ರತಿ ವರ್ಷ ಆಗಸ್ಟ್ 31ರಂದು ವಿಮುಕ್ತ ದಿನವನ್ನಾಗಿ ಆಚರಿಸಲಾಗುತ್ತದ್ಟೆಂದು ಕರ್ನಾಟಕ ಅಲೆಮಾರಿ ವಿಮುಕ್ತ ಬುಡಕಟ್ಟು ಚಪ್ಪರಬಂದ್ ಸಮಾಜ ಸಂಘದ ಜಿಲ್ಲಾಧ್ಯಕ್ಷ ಗೈಬುಸಾಬ (ಬಿ.ಬಾಬು) ಹೇಳಿದರು.
ಬೆಟಗೇರಿಯ ಸೆಟ್ಲಮೆಂಟ್ನಲ್ಲಿ ನಡೆದ 73ನೇ ವಿಮುಕ್ತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೂಲತಃ ಅಲೆಮಾರಿಗಳಾದ ಚಪ್ಪರಬಂದ್ ಸಮುದಾಯದ ಜನ, ಈಗಲೂ ಬುಡಕಟ್ಟು ಸಂಸ್ಕೃತಿ, ಆಚರಣೆ, ಸಂಪ್ರದಾಯ ಮತ್ತು ಭಾಷೆಯನ್ನು ಉಳಿಸಿ ಮುನ್ನಡೆಯುತ್ತಿದೆ ಎಂದು ಹೇಳಿದರು.
ಚಪ್ಪರಬಂದ್ ಸಮುದಾಯ ಬುಡಕಟ್ಟು ಸಮಾಜಕ್ಕೆ ಸೇರಿದ್ದರೂ ಸರಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿಯೂ ಸೇರ್ಪಡೆಯಾಗಿಲ್ಲ. ಕನಿಷ್ಠ ಅಲೆಮಾರಿಗಳ ಪಟ್ಟಿಯಲ್ಲೂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ರಾಜ್ಯ ಸರಕಾರ ಚಪ್ಪರಬಂದ್ ಸಮುದಾಯವನ್ನು ಅಲೆಮಾರಿ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಜೊತೆಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಇಮಾಮಸಾಬ ಹುಲ್ಲೂರ, ಹುಸೇನಸಾಬ ಚಪ್ಪರಬಂದ್, ಇಮಾಮಸಾಬ ಮುಜಾವರ, ಶಿವರಾಜ ಕೊರಸ, ನಗರಸಭೆ ಸದಸ್ಯ ಸುರೇಶ ಕಟ್ಟಿಮನಿ, ಜಮಾಲಸಾಬ ಸಿಂದಗಿ, ಬಶೀರ ಸಂಕನಾಳ, ಹುಸೇನಸಾಬ ರಾಜನಾಳ, ಇಮಾಮಸಾಬ ವಡ್ಡೊಡಗಿ, ಯಾಸೀನ್ ಬಾಗೇವಾಡಿ, ಯಾಸೀನ್ ಫಾರೂಕ್ ಸಿಂದಗಿ, ಅಬ್ದುಲ್ ವಡ್ಡೊಡಗಿ, ನಬಿರಸೂಲ ಕೊಪ್ಪ, ಜಾವೇದ ಬಳಬಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು. ಎಸೆಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.