ವಿಜಯಸಾಕ್ಷಿ ಸುದ್ದಿ, ಗದಗ : ನಿಶ್ಚಿತ ಗುರಿಯೊಂದಿಗೆ ಶ್ರದ್ಧೆ, ನಿಷ್ಟೆಯಿಂದ ಫಲಾಪೇಕ್ಷೆ ಇಲ್ಲದೇ ನಾವು ಮಾಡುವ ಯಾವುದೇ ಕೆಲಸವಿರಲಿ ಅದು ಆತ್ಮ ತೃಪ್ತಿ ನೀಡುವುದರೊಂದಿಗೆ, ಸಮಾಜಕ್ಕೆ ಕೊಡುಗೆಯಾಗಿ ಸಲ್ಲುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಹಾಗೂ ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತರಾದ ಮಹೇಶ ಪೋತದಾರ ಹೇಳಿದರು.
ಅವರು ನಗರದ ವಿಜಯನಗರ ಬಡಾವಣೆಯ ಶ್ರೀ ವಿಶ್ವಕರ್ಮ ಸಮುದಾಯ ಭವನದಲ್ಲಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗಸಂಸ್ಥೆಗಳು ಮತ್ತು ವಾರ್ಡಿನ ನಾಗರಿಕರು ಸಂಘಟಿಸಿದ್ದ 78ನೇ ಸ್ವಾತಂತ್ರೋತ್ಸವದ ಸಂಜೆ ಸಮಾರಂಭದಲ್ಲಿ, ಸಮಾಜಕಲ್ಯಾಣ ಇಲಾಖೆ ಹಾಗೂ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಕೊಂಡ ಹಿನ್ನೆಲೆಯಲ್ಲಿ ಸಂಘಟಕರು ಸ್ವಾಗತಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಐದು ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಯಾಗಿ ಆತ್ಮತೃಪ್ತಿಯೊಂದಿಗೆ ಪ್ರಾಮಾಣಿಕವಾಗಿ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ಇದೀಗ ದೇವರು, ಶರಣರು, ಸಂತರ ನಾಡು, ಮುದ್ರಣ ಹಾಗೂ ಸಂಗೀತ ಕಾಶಿ, ಕಲಾವಿದರ ಬೀಡಾದ ಗದಗ ಜಿಲ್ಲೆಗೆ ಸೇವೆ ಸಲ್ಲಿಸಲು ಬಂದಿರುವುದು ನನ್ನ ಸುಕೃತ. ಎಲ್ಲರ ಪ್ರೀತಿ ವಿಶ್ವಾಸಗಳೊಂದಿಗೆ ಜನಮೆಚ್ಚುವಂತೆ ಕರ್ತವ್ಯ ನಿರ್ವಹಿಸುವೆ ಎಂದರು.
ವಿಶ್ವಕರ್ಮ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಬಡಿಗೇರ, ವಿಶ್ವಕರ್ಮ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಮೌನೇಶ ಸಿ.ಬಡಿಗೇರ, ವಾರ್ಡಿನ ಹಿರಿಯರಾದ ಶಿವಾನಂದ ಹೊಂಬಳ, ಶಶಿಕಾಂತ ಗುಂಜಾಳ, ಹನಮಂತಗೌಡ ಪಾಟೀಲ, ನಾಗಪ್ಪ ಚುರ್ಚಿಹಾಳ, ಶಿವಪ್ಪ ಮೇಟಿ, ವಿಶ್ವಕರ್ಮ ಮಹಳಾ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಿಂದಮ್ಮ ನಾ. ವಡ್ಡಟ್ಟಿ, ಬೆಟಗೆರಿ ಕಾಳಿಕಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ಬಾಲರಾಜ ಕೊಣ್ಣೂರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಯ.ಕಮ್ಮಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಜಗೋಪಾಲ ಡಿ.ಕಡ್ಲಿಕೊಪ್ಪ ಮಾತನಾಡಿ, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಾದ ಮಹೇಶ ಪೋತದಾರ ಅವರು ಹಿಂದೆ ಸೇವೆ ಸಲ್ಲಿಸಿದ ಎಲ್ಲ ಜಿಲ್ಲೆಗಳಲ್ಲಿ ಅಪಾರ ಜನಪ್ರೀಯತೆ ಪಡೆದಿರುವರು. ಇಲ್ಲಿ ಕೂಡಾ ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ಅಭಿವೃದ್ಧಿಯಲ್ಲಿ ವಿಶೇಷ ಕೊಡುಗೆ ಸೇವೆ ಸಲ್ಲಿಸಬೇಕು ಎಂದು ಆಶಿಸಿದರು.



