ವಿಜಯಸಾಕ್ಷಿ ಸುದ್ದಿ, ರೋಣ : ದೇಶದ ಸ್ವಾತಂತ್ರ್ಯಕ್ಕಾಗಿ ರೋಣ ತಾಲೂಕಿನ ಕೊಡುಗೆ ಅನನ್ಯವಾಗಿದೆ ಎಂಬ ಇತಿಹಾಸವನ್ನು ಯಾರು ಕೂಡ ಮರೆಯಬಾರದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಗುರುವಾರ ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಜರುಗಿದ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಅನೇಕ ಗ್ರಾಮಗಳ ಮಹನೀಯರು ದೇಶದ ಹಿತಕ್ಕಾಗಿ ಮತ್ತು ಸ್ವಾತ್ರಂತ್ರ್ಯಕ್ಕಾಗಿ ತ್ಯಾಗ-ಬಲಿದಾನಗಳನ್ನು ನೀಡಿದ್ದಾರೆ. ಈ ಎರಡು ತಾಲೂಕಿನಲ್ಲಿ ಅಡಕವಾಗಿದ್ದ ದೇಶ ಪ್ರೇಮವನ್ನು ಕಂಡ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರು ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿದ್ದು ಇತಿಹಾಸವಾಗಿದೆ. ದಿ. ಅಂದಾನಪ್ಪ ದೊಡ್ಡಮೇಟಿಯವರ ದೇಶಪ್ರೇಮ ನಮಗೆ ಮಾದರಿಯಾಗಿದೆ ಎಂದರು.
ರೋಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರಿಯಾಯೋಜನೆಗಳನ್ನು ರೂಪಿಸಲಾಗಿದೆ. ವಿಶೇಷವಾಗಿ ರೋಣ ನಗರವನ್ನು ಸುಂದರ ಪಟ್ಟಣವನ್ನಾಗಿ ರೂಪಿಸಲು ಈಗಾಗಲೇ 20 ಕೋಟಿ ಅನುದಾನವನ್ನು ಮಿಸಲಿಡಲಾಗಿದ್ದು, ಮಳೆ ಬಿಡುವು ನೀಡುತ್ತಿದ್ದಂತೆ ರಸ್ತೆ ಅಗಲೀಕರಣ ಕೆಲಸವನ್ನು ಆರಂಭಿಸಲಾಗುವುದು ಎಂದ ಅವರು, 2 ಕೋಟಿ ರೂಗಳ ವೆಚ್ಚದಲ್ಲಿ ಕೃಷಿ ಇಲಾಖೆಯ ಕಟ್ಟಡ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಗುವುದು ಎಂದರು.
ತಹಸೀಲ್ದಾರ ನಾಗರಾಜ ಕೆ ಧ್ವಜಾರೋಹಣವನ್ನು ನೆರವೇರಿಸಿದರು. ಪುರಸಭೆಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.