ಮಂಡ್ಯ:- 87 ನೇ ಸಾಹಿತ್ಯ ಸಮ್ಮೇಳನಕ್ಕೆ ಈ ಬಾರಿ ಐತಿಹಾಸಿಕ ಮಹತ್ವವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದ್ದಾರೆ.
ಈ ಬಾರಿ ಸಮ್ಮೇಳನ ಕಳೆದ ಬಾರಿಗಿಂತಲೂ ವ್ಯವಸ್ಥಿತವಾಗಿರುತ್ತದೆ ಎನ್ನುವ ಮೂಲಕ ಮಂಡ್ಯದಲ್ಲಿ ಡಿ. 20ರಿಂದ 23 ರವರೆಗೆ ನಡೆಯುವ ಅಖಿಲ ಭಾರತ 87 ನೇ ಸಾಹಿತ್ಯ ಸಮ್ಮೇಳನ ಒಳ ಹೊರಗುಗಳ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಮಾತನಾಡಿದ್ದಾರೆ.
ರಾಜ್ಯಕ್ಕೆ ಕರ್ನಾಟಕ ಅಂತ ನಾಮಕರಣ ಆಗಿದ್ದು 1973ರಲ್ಲಿ. ಮೈಸೂರು ರಾಜ್ಯ ‘ಕರ್ನಾಟಕ’ ಅಂತ ಹೆಸರಾದ ಮೇಲೆ ಮೊದಲ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದದ್ದು 1974ರಲ್ಲಿ, ಇದೇ ಮಂಡ್ಯದಲ್ಲಿ. ಮೊದಲ ಬಾರಿಗೆ ಲೇಖಕಿಯೊಬ್ಬರು ಈ ಸಮ್ಮೇಳನದ ಸರ್ವಾಧ್ಯಕ್ಷರಾದರು.
ಖ್ಯಾತ ಸಾಹಿತಿ ಜಯದೇವಿ ತಾಯಿ ಲೆಗಾಡೆ ಈ ಗೌರವಕ್ಕೆ ಭಾಜನರಾದರು. ಅದಾಗಿ 50 ವರ್ಷಗಳಾಗಿವೆ. ಈ 50 ವರ್ಷದ ಹಿನ್ನೆಲೆಯಲ್ಲಿ ಮತ್ತೆ ಮಂಡ್ಯದಲ್ಲೇ ಸಮ್ಮೇಳನ ನಡೆಯುತ್ತಿರುವುದು ವಿಶೇಷ. ಹಾಗಾಗಿ ಇದೊಂದು ಐತಿಹಾಸಿಕ ಹಾಗೂ ವೈಶಿಷ್ಠ್ಯಪೂರ್ಣ ಸಮ್ಮೇಳನ.
ಖಂಡಿತಾ. ವಿಶೇಷ ಕಾರ್ಯಕ್ರಮಗಳಿರುತ್ತವೆ. ಇದೀಗ ಮೂರನೇ ಬಾರಿಗೆ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಮೊದಲನೇ ಸಮ್ಮೇಳನ 1974ರಲ್ಲಾಯ್ತು. ಆ ಬಳಿಕ 1994ರಲ್ಲಿ ನಡೆಯಿತು. ಇದೀಗ ಮೂರನೇ ಬಾರಿ 2024ರಲ್ಲಿ ನಡೆಯುತ್ತಿದೆ.
ಎಲ್ಲೋ ಒಂದು ಕಡೆ ನಾಲ್ಕರ ನಂಟಿದೆ ಎಂದು ತೋರುತ್ತದೆ. ಎರಡನೇ ಸಮ್ಮೇಳನ ಮಾಡಿದಾಗ ಈಗಿನ ಸಮ್ಮೇಳನದ ಸರ್ವಾಧ್ಯಕ್ಷರಾದ ಗೊ ರು ಚನ್ನಬಸಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಈ ಎಲ್ಲ ಅಂಶಗಳ ಮೆಲುಕು, ನೆನಪು ಕಾರ್ಯಕ್ರಮದಲ್ಲಿ ಇದ್ದೇ ಇರುತ್ತದೆ.
ಈ ಬಾರಿ ಒಟ್ಟು 31 ಗೋಷ್ಠಿಗಳಿವೆ. ಇದರಲ್ಲಿ ಮಾತಾಡುವವರು ಸಹಜವಾಗಿ ಈ ವಿಶೇಷತೆಗಳ ಉಲ್ಲೇಖ ಮಾಡುತ್ತಾರೆ. ಇತರ ಗೋಷ್ಠಿಗಳಲ್ಲೂ ವಿಶೇಷತೆ ಇದೆ. ಮೊದಲ ಬಾರಿಗೆ ಕಣ್ಣು ಕಾಣದ ದೃಷ್ಟಿ ಚೇತನರಿಂದ ಮೊದಲನೇ ಕವಿಗೋಷ್ಠಿ ನಡೆಯುತ್ತದೆ.
ಮಹಿಳೆಯರಿಗೆ ವಿಶೇಷ ಗೋಷ್ಠಿಯಿದೆ. ಮೊದಲನೇ ಬಾರಿಗೆ ‘ರಾಜಕೀಯದಲ್ಲಿ ಸಾಹಿತ್ಯ-ಸಾಹಿತ್ಯದಲ್ಲಿ ರಾಜಕೀಯ’ ಎಂಬ ಥೀಮ್ನಡಿ ಚಿಂತನಾಗೋಷ್ಠಿ ನಡೆಯಲಿದೆ ಎಂದರು.
ಗೋಷ್ಠಿಗಳಲ್ಲಿ ಪಾಲ್ಗೊಳ್ಳುವವರೆಲ್ಲರೂ ವಿದ್ವಾಂಸರೇ ಇದ್ದಾರೆ. ಒಟ್ಟು 239 ಚಿಂತಕರು ಭಾಗವಹಿಸುತ್ತಿದ್ದಾರೆ. 31 ಗೋಷ್ಠಿ ಇದೆ. ಪ್ರಧಾನ ವೇದಿಕೆ, ಸಮಾನಾಂತರ ವೇದಿಕೆಗಳಿವೆ. 156 ವಿದ್ವಾಂಸರು, 83 ಮಂದಿ ಕವಿಗಳು ಇರುತ್ತಾರೆ. ಮೊದಲ ಬಾರಿಗೆ ಕನ್ನಡದ ಜೊತೆಗೆ ಉಪ ಭಾಷೆಗಳಾದ ಹವ್ಯಕ, ತುಳು, ಕೊಡವ, ಕೊಂಕಣಿ, ಕುಂದ ಕನ್ನಡ, ಬ್ಯಾರಿ, ಲಂಬಾಣಿ ಭಾಷೆಗಳ ಕವಿತಾ ವಾಚನ ಇರುತ್ತದೆ ಎಂದರು.