ವಿಜಯಸಾಕ್ಷಿ ಸುದ್ದಿ, ಗದಗ : ದೇಶೀಯ ಆಯುರ್ವೇದ ಪದ್ಧತಿ ಅತ್ಯಂತ ಶ್ರೇಷ್ಠವಾಗಿದೆ. ಆದ್ದರಿಂದಲೇ ಪ್ರಪಂಚದ ವಿವಿಧ ದೇಶದವರು ಭಾರತಕ್ಕೆ ಆಯುಷ್ ಚಿಕಿತ್ಸೆಯನ್ನು ಪಡೆಯಲು ಅರಸಿ ಬರುತ್ತಾರೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಯುಷ್ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಶ್ರೀ ಧನ್ವಂತರಿ ಜಯಂತಿ ಹಾಗೂ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಆಯುಷ್ ಇಲಾಖೆಯಲ್ಲಿ ಉತ್ತಮವಾದ ಯೋಗ ಹಾಲ್, ಪಂಚಕರ್ಮ ಚಿಕಿತ್ಸಾ ವ್ಯವಸ್ಥೆ ಲಭ್ಯವಿದ್ದು, ಇದರ ಸೌಲಭ್ಯ ಪಡೆಯಲು ವಿವಿಧ ಜಿಲ್ಲೆಯಿಂದ ಸಾರ್ವಜನಿಕರು ಆಗಮಿಸುವುದು ಒಳ್ಳೆಯ ಸಂಗತಿ. ಪ್ರಸ್ತುತ ದಿನಮಾನದಲ್ಲಿ ಶಸ್ತçಚಿಕಿತ್ಸೆಗೆ ಒಳಪಡಬೇಕಾದ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆಯೆಡೆ ಹೋಗುತ್ತಿದ್ದಾರೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಮಲ್ಲಿಕಾರ್ಜುನ ಉಪ್ಪಿನ ಮಾತನಾಡಿ, ಜಿಲ್ಲೆಯಲ್ಲಿನ ಎಲ್ಲ ಆಸ್ಪತ್ರೆ ಹಾಗೂ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಅಕ್ಟೋಬರ್ 21ರಿಂದ ಅಕ್ಟೋಬರ್ 25ರವರೆಗೆ ಆಯುರ್ವೇದ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡು 12ರಿಂದ 21 ವಯಸ್ಸಿನ ಹದಿಹರೆಯದ ಹೆಣ್ಣುಮಕ್ಕಳ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ, ಪರಿಸರ ರಕ್ಷಣೆ ಹಾಗೂ ಸಸ್ಯ-ಪ್ರಾಣಿಗಳ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ, ಮಾನವನ ಸ್ವಾಸ್ಥ್ಯ ರಕ್ಷಣೆ ಹಾಗೂ ಯೋಗಕ್ಷೇಮದಲ್ಲಿ ಆಯುರ್ವೇದದ ಪಾತ್ರ, 45 ವರ್ಷ ಮೇಲ್ಪಟ್ಟ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದ ಪಾತ್ರ, ದಿನಾಚರಣೆ ಮಹತ್ವ ಹಾಗೂ ಜಾಗತೀತ ಆರೋಗ್ಯಕ್ಕಾಗಿ ಆಯುರ್ವೇದ ನಾವೀನ್ಯತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕುರಿತಾಗಿ ಆಚರಿಸಲಾಗಿರುವ ಕಾರ್ಯಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಆಶಾ ನಾಯ್ಕ ಧನ್ವಂತರಿ ಜಯಂತಿ ಕುರಿತು ಸುದೀರ್ಘವಾಗಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಜಿಲ್ಲಾ ಪಂಚಾಯತ ಸಿಇಓ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಡಾ. ಪಿ.ಎಸ್. ಪಲ್ಲೇದ, ಡಾ. ಕಮಲಾಕರ, ಸಂಜೀವ ನಾರಪ್ಪನವರ ಸೇರಿದಂತೆ ಆಯುಷ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಕಾಶ ಮಡಿವಾಳರ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಧನ್ವಂತರಿ ಜಯಂತಿಯನ್ನು ಹಬ್ಬದ ರೀತಿ ಎಲ್ಲರೂ ಸಂಭ್ರಮದಿಂದ ಆಚರಿಸಿದ್ದು ಖುಷಿಯ ವಿಚಾರ. ಈ ವರ್ಷ ಜಿಲ್ಲೆಯಾದ್ಯಂತ ಆಯುರ್ವೇದ ಸಪ್ತಾಹ ಆಚರಿಸಿ ಜನರಿಗೆ ಆಯುರ್ವೇದ ಬಗ್ಗೆ ಅರಿವು ಮೂಡಿಸಿದ್ದು ವಿಶೇಷವಾಗಿದೆ. ಜಿಲ್ಲೆಯ ಆಯುಷ್ ಇಲಾಖೆಯ ಅಧಿಕಾರಿಗಳು ಆಯುರ್ವೇದ ರಂಗದಲ್ಲಿ ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ಹೆಮ್ಮಯ ಸಂಗತಿ. ಆಯುರ್ವೇದವು ಜಗತ್ತು ಸೃಷ್ಟಿಯಾದಾಗಿನಿಂದಲೇ ನಿರ್ಮಾಣವಾಗಿದೆ ಎಂದು ಮಲ್ಲಿಕಾರ್ಜುನ ಉಪ್ಪಿನ ತಿಳಿಸಿದರು.