ವಿಜಯಸಾಕ್ಷಿ ಸುದ್ದಿ, ಗದಗ : ದಿಂಗಾಲೇಶ್ವರ ಶ್ರೀಗಳು ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧಿಪತಿಯಾಗಲು ವಿರೋಧಗಳಿದ್ದು, ಇದನ್ನು ತಣ್ಣಗಾಗಿಸಲು ಪ್ರಹ್ಲಾದ ಜೋಶಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕುತಂತ್ರ ನಡೆಸಿದ್ದಾರೆ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಿಂಗಾಲೇಶ್ವರ ಸ್ವಾಮೀಜಿ ಶಿರಹಟ್ಟಿಯ ಭಾವೈಕ್ಯತೆಯ ಮಠಕ್ಕೆ ಕುತಂತ್ರದಿಂದಲೇ ರಾತ್ರೋರಾತ್ರಿ ಉತ್ತರಾಧಿಕಾರಿ ಆಗಿದ್ದಾರೆ. ಇಂಥದೇ ಕುತಂತ್ರ ನಡೆಸಿ ಮೂರು ಸಾವಿರ ಮಠದ ಪೀಠಾಧಿಪತಿಯಾಗಲು ಹವಣಿಸಿದರು.
ಪ್ರಾರಂಭದಲ್ಲಿ ಬೆಂಬಲ ನೀಡಿದವರೂ ಇವರ ಕುತಂತ್ರ ಅರಿತು ವಿರೋಧ ವ್ಯಕ್ತಪಡಿಸಿದರು. ಆ ವಿರೋಧವನ್ನು ತಣ್ಣಗಾಗಿಸಲು ರಾಜಕೀಯ ನಾಟಕ ಆರಂಭಿಸಿದ್ದಾರೆ ಎಂದು ಆಪಾದಿಸಿದರು.
ಸ್ವಾಮಿತ್ವದ ಯಾವುದೇ ಲಕ್ಷಣ ಇಲ್ಲದ ದಿಂಗಾಲೇಶ್ವರ ಸ್ವಾಮೀಜಿ ಮಠ ಬಿಟ್ಟು ರಾಜಕಾರಣ ಮಾಡಲಿ.
ಇಲ್ಲವೇ ಜನರೇ ಮಠದಿಂದ ಹೊರಹಾಕುವ ಕಾಲ ಬಂದೀತು. ದಿಂಗಾಲೇಶ್ವ ಶ್ರೀಗಳು ಪ್ರಹ್ಲಾದ ಜೋಶಿ ಅವರಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಎನ್ನುತ್ತಾರೆ. ಆದರೆ ಯಾವ ರೀತಿ ಅನ್ಯಾಯ ಆಗಿದೆ ಎಂಬುದನ್ನು ಹೇಳುತ್ತಿಲ್ಲ. ಈ ಹಿಂದೆ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ನಡೆದಾಗ ಅದನ್ನು ವಿರೋಧಿಸಿ ಸಮಾವೇಶ ಸಂಘಟಿಸಿದರು. ಆದರೆ ಈಗ ಅದೇ ಲಿಂಗಾಯತ ಹೆಸರಿನಲ್ಲಿ ರಾಜಕಾರಣ ಮಾಡುವಂತಾಗಿದೆ ಎಂದು ಆರೋಪಿಸಿದರು.
ದ್ವೇಷ ಬಿಡು ಪ್ರೀತಿ ಮಾಡು ಎನ್ನುವ ಸಂದೇಶ ಸಾರಿದ ಶಿರಹಟ್ಟಿ ಮಠದ ಉತ್ತರಾಧಿಕಾರಿಯಾಗಿ ಕೋಮುವಾದಿ ಬಿಜೆಪಿ ಪಕ್ಷದ ಪರವಾಗಿದ್ದಾರೆ. ಕೇವಲ ಪ್ರಹ್ಲಾದ್ ಜೋಶಿ ವಿರೋಧಿಸುವುದಕ್ಕಾಗಿ ಈ ರಾಜಕೀಯ ನಾಟಕ ಆರಂಭಿಸಿದ್ದಾರೆ. ಇಂಥವರಿಗೆ ಹುಬ್ಬಳ್ಳಿ-ಧಾರವಾಡ ಮತದಾರರು ಠೇವಣಿ ಸಿಗದಂತೆ ಮಾಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶೇಕಣ್ಣ ಕವಳಿಕಾಯಿ, ಶರೀಫ್ ಬಿಳೆಯಲಿ, ಅನಂತ ಕಟ್ಟಿಮನಿ, ಆನಂದ ಸಿಂಗಾಡಿ, ಮುತ್ತು ಬಿಳೆಯಲಿ ಇತರರು ಉಪಸ್ಥಿತರಿದ್ದರು.