ವಿಜಯಸಾಕ್ಷಿ ಸುದ್ದಿ, ಹಾವೇರಿ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂರಾರು ಕೋಟಿ ರೂ. ಹವಾಲಾ ಹಣವನ್ನು ಪಡೆದಿದ್ದಾರೆ. ಐಟಿ ರೇಡ್ ಆಗಿದ್ದಾಗ ಎಲೆಕ್ಟ್ರೋಲ್ ಬಾಂಡ್ ಮೂಲಕ ಹಣ ಕೊಟ್ಟಿದ್ದಾರೆ. ಕೋವಿಶೀಲ್ಡ್ ಕಂಪನಿಗಳಿಂದ ನೂರಾರು ಕೋಟಿ ರೂ ಹಣ ಬೊಮ್ಮಾಯಿಯವರಿಗೆ ಬಂದಿದೆ ಎಂಬ ಗಂಭೀರ ಆರೋಪವಿದ್ದಾಗಲೂ ಅವರು ಈ ಕುರಿತು ಉತ್ತರ ಕೊಡುತ್ತಿಲ್ಲ. ಸುಮ್ಮನೆ ಇದ್ದಾರೆ ಎಂದರೆ ಅವರು ಹಣ ತೆಗೆದುಕೊಂಡಿದಾರೆ ಎಂದೇ ಅರ್ಥ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಮಾಜಿ ಸಿಎಂ, ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.
ಶನಿವಾರ ನಗರದ ಖಾಸಗಿ ಹೋಟೆಲ್ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾವು ಮುಖ್ಯಮಂತ್ರಿಯಾಗಿದ್ದಾಗಲೇ ರಾಜ್ಯದ ರೈತರಿಗೆ ಏನೂ ಮಾಡದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈಗ ಋಣ ತೀರಿಸಲು ಬಿಜೆಪಿಗೆ ಮತ ನೀಡಿ ಎಂದು ಕೇಳುತ್ತಿರುವುದು ತೀರಾ ಹಾಸ್ಯಾಸ್ಪದವಾಗಿದೆ. ಕರ್ನಾಟಕದ ರೈತರನ್ನು ಬದುಕಿಸುವ ಪ್ರಯತ್ನವನ್ನು ಬೊಮ್ಮಾಯಿ ಮಾಡಲೇ ಇಲ್ಲ.
ಸಿಎಂ ಇದ್ದಾಗ ಕೇಂದ್ರ ನಾಯಕರ ಬಳಿ ರೈತರ ಸಮಸ್ಯೆ ಹೇಳಿಯೇ ಇಲ್ಲ. ಕೋವಿಡ್ ಇದ್ದಾಗ ಅವರು ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಈಗ ಸುಮ್ಮನೆ ಭಾಷಣದಲ್ಲಿ ಋಣ ತೀರಿಸುವ ಕೆಲಸ ಮಾಡಿ ಎಂದು ಬೊಮ್ಮಾಯಿ ಜನರ ಬಳಿ ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿಯು ಜನರಲ್ಲಿ ಆತಂಕ ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಇದೇ ರೀತಿ ಬಿಜೆಪಿ ಮೂರು ಬಾರಿ ಪ್ರಯತ್ನ ಮಾಡಿದೆ. ಪ್ರತಿ ಬಾರಿ ಬಿಜೆಪಿ ಭಾವನಾತ್ಮಕ ವಿಷಯದಲ್ಲಿ ಚುನಾವಣೆ ಮಾಡಿದೆ. ಪುಲ್ವಾಮಾ ದಾಳಿಯನ್ನು ಲಾಭಕ್ಕಾಗಿ ಬಳಸಿಕೊಂಡಿದೆ. ಮೋದಿಗಿಂತ ದೇಶದಲ್ಲಿ ಶ್ರೇಷ್ಠ ಯಾರಿಲ್ಲ ಎಂಬ ಭಾವನೆ ತಂದಿದೆ. ನಾವು ನಾಲ್ಕನೇ ಬಾರಿಗೆ ಗೆಲ್ಲುತ್ತೇವೆಂದು ಹೇಳುವ ಬಿಜೆಪಿಗೆ 400 ಕೆಜಿ ಮದ್ದು ಹೇಗೆ ಬಂತು ಎಂಬ ವಿಚಾರ ಗೊತ್ತಿರಲಿಲ್ಲವೇ ಎಂದು ಮಾನೆ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಮಾಜಿ ಶಾಸಕ ಡಿ.ಆರ್. ಪಾಟೀಲ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರಿದ್ದರು.
ಈಗ ನೇಹಾ ಹಿರೇಮಠ ಸಾವಿನಲ್ಲೂ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ. ಚುನಾವಣೆ ಆದ ಬಳಿಕ ನೇಹಾ ಹಿರೇಮಠ ಮನೆಯ ಕಡೆ ಇವರು ಸುಳಿಯಲಾರರು ಎಂದ ಶಾಸಕ ಶ್ರೀನಿವಾಸ ಮಾನೆ, ಇಡೀ ದೇಶದಲ್ಲಿ ಬಿಜೆಪಿ ವಿರೋಧಿ ಅಲೆ ಇದೆ. ಇದೀಗ ಬಿಜೆಪಿ ಹುಟ್ಟುಹಾಕಿದ ಆಸ್ತಿ-ಪಾಸ್ತಿ ಅವರಿಗೆ ಇವರಿಗೆ ಕೊಡುತ್ತಾರೆ ಎಂಬುದು ಸುಳ್ಳು. ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ಇರುವುದು ಮಾತ್ರ ಅಧಿಕೃತವಾಗಿದೆ ಎಂದರು.